5

                                      


 ಭೂ ಕಬಳಿಕೆ ಧರ್ಮಸ್ಥಳದವರು ಮಾತ್ರ ಮಾಡಿದ್ದ?
     ಓ ಮೊನ್ನೆಯಿಂದ ಧರ್ಮಸ್ಥಳದವರು ಭೂ ಕಬಳಿಕೆ ಮಾಡಿದ್ದಾರೆ ಎಂಬ ಅರಚಾಟ ಜೋರಾಗಿ ಶುರುವಾಗಿದೆ.  ಈ ಅರಚಾಟ ಹಿಂದೆಯೂ ಇತ್ತು. ಆದರೆ ಈಗ ಕಂಡೆ ಯಿಂದಲೇ ಅರಚಾಟ ಶುರುವಾಗಿದೆ. ಹಾಗೆಂದು ಇಲ್ಲಿ ಭೂ ಕಬಳಿಕೆ ಮಾಡದ್ದು ಯಾರು? 74ನೇ ಇಸವಿಯಲ್ಲಿ ಭೂ ಮಸೂದೆ ಎಂಬ ಕಾನೂನು ಬಂದಾಗ ಇದೇ ಧರ್ಮಸ್ಥಳ ದವರ ಭೂಮಿಯ ಸಮೇತ ಇತರೇ ಜಮೀನ್ದಾರರ ಭೂಮಿಯನ್ನು ಗಲಾಟೆ ಮಾಡಿ, ಬಲಾತ್ಕಾರವಾಗಿ ನುಂಗಿ ನೀರು ಕುಡಿದದ್ದು ಯಾರು? ಅದು ಭೂ ಕಬಳಿಕೆ ಅಲ್ವಾ? ಆ ಪ್ರಕ್ರಿಯೆಯನ್ನು ಏನೆಂದು ಕರೆಯಲಿ? ಆ ಕಬಳಿಕೆ ನಂತರ ಅದೇ ಭೂಮಿಯ ಆಸುಪಾಸಿನ ಸರ್ಕಾರಿ ಭೂಮಿಯನ್ನು ಕುಮ್ಕಿ ಹೆಸರಲ್ಲಿ ಕಬಳಿಕೆ ಮಾಡಿದ್ದು ಯಾರು? ಹಾಗೆ ಸರ್ಕಾರಿ ಭೂಮಿಯನ್ನು ಕುಮ್ಕಿ ಹೆಸರಲ್ಲಿ ಕಬಳಿಕೆ ಮಾಡಿದ ನಂತರ ಕುಮ್ಕಿ ಭೂಮಿಯ ಆಸು ಪಾಸಿನ ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ಆಕ್ರಮಣ ಮಾಡಿ ಆ ಅಕ್ರಮವನ್ನು ಸಕ್ರಮ ಮಾಡಿ ಕೊಂಡು ಆ ಭೂಮಿಯನ್ನೂ ಕಬಳಿಸಿದ್ದು ಯಾರು? ನಮ್ಮಲ್ಲೆಲ್ಲ ಎಕರೆ ಗಟ್ಟಲೆ ಭೂಮಿ ಇದ್ದರೂ ಹೆಂಡತಿ ಹೆಸರಿನಲ್ಲಿ, ಮಗನ ಹೆಸರಲ್ಲಿ, ಮಗಳ ಹೆಸರಿನಲ್ಲಿ, ಸೊಸೆ ಹೆಸರಿನಲ್ಲಿ, ಕುಟುಂಬಿಕರ ಹೆಸರಿನಲ್ಲಿ ಗೋಮಾಳಗಳನ್ನು, ಖಾಲಿ ಸರ್ಕಾರಿ ಭೂಮಿಯನ್ನು, ಅರಣ್ಯ ಪ್ರದೇಶಗಳನ್ನು, ಶಾಲಾ ಕಾಲೇಜುಗಳ ಭೂಮಿಯನ್ನು, ಕಡೆಗೆ ಸ್ಮಶಾನದ ಜಾಗವನ್ನೂ ಬಿಡದೆ ಅಕ್ರಮ ಸಕ್ರಮದಡಿ ಮಂಜೂರು ಮಾಡಿಕ್ಕೊಂಡು ಕಬಳಿಸಿದ್ದು ಯಾರು? ಇಷ್ಟಾಗಿಯೂ ಮನೆ ನಿವೇಶನದ ಹೆಸರಿನಲ್ಲಿ ಕುಟುಂಬದ ಎಲ್ಲಾ ಸದಸ್ಯರಿಗೂ ಮನೆ ನಿವೇಶನದ ಜಾಗ ಮಾಡಿಕೊಂಡು ಭೂಮಿ ನುಂಗಿದ್ದು ಯಾರು? ದಲಿತರ ಭೂಮಿಯನ್ನು ಅವರಿಗೆ ಚಿಲ್ಲರೆ ಸಾಲ ಕೊಟ್ಟು, ಅದಕ್ಕೆ ಅಂಡಿಗುಂಡಿ ಬಡ್ಡಿ ಹಾಕಿ ಕೋರ್ಟ್ ಏಲಂ ಮಾಡಿಸಿ ನುಂಗಿ ನೀರು ಕುಡಿದದ್ದು ಯಾರು? ಸಾರ್ವಜನಿಕ ‌ರಸ್ತೆಯ ಕಬಳಿಕೆ, ಕೆರೆ ಒತ್ತುವರಿ, ನದಿ ಜಾಗ ಕಬಳಿಕೆ, ಮೈದಾನ ಕಬಳಿಕೆ, ಕಾದಿರಿಸಿದ ಭೂಮಿ ಕಬಳಿಕೆ, ಪಾರ್ಕಿಂಗ್ ಒತ್ತುವರಿ ಹೀಗೆ ಭೂಮಿ ವಿಷಯದಲ್ಲಿ ನಾವು ಮಾಡದ ಘನಂಧಾರಿ ಕೆಲಸಗಳೇ ಇಲ್ಲ. ಇಷ್ಟೆಲ್ಲಾ ಒಳ್ಳೆಯ ಕೆಲಸ ಮಾಡಿರುವ ನಾವು ಈವತ್ತು ಧರ್ಮಸ್ಥಳದವರು ಭೂ ಕಬಳಿಕೆ ಮಾಡಿದರು ಎಂದು ಭೂಕಂಪ ಆಗುವಷ್ಟು ಬೊಬ್ಬೆ ಹೊಡೆಯುತ್ತಿದ್ದೇವೆ. ನಾಚಿಕೆ ಮಾನ ಮರ್ಯಾದೆ, ಲಜ್ಜೆ ಪೊಲೆಜ್ಜಿ ಏನಾದರೂ ನಮಗಿದೆಯಾ? ಹಾಗೆಲ್ಲ ಭೂ ಕಬಳಿಕೆ ಮಾಡದೆ ಇರಲು ಧರ್ಮಸ್ಥಳದವರು ಏನು ದಿಗಂಬರ ಸ್ವಾಮಿಗಳಾ? ಅಖಂಡ ಬ್ರಹ್ಮಚಾರಿಗಳಾ? ವಿವಿಧ ಮಠಗಳ ಸ್ವಾಮಿಗಳೇ ದೇವರ ಹೆಸರಿನಲ್ಲಿ, ಖಾವೀ ಹೆಸರಿನಲ್ಲಿ, ಮಠದ ಹೆಸರಿನಲ್ಲಿ ಕಂಡ ಕಂಡಲ್ಲಿ ಬೇಲಿ ಹಾಕುವಾಗ ಧರ್ಮಸ್ಥಳದವರು ಸುಮ್ಮನೆ ಕೈಕಟ್ಟಿ ‌ಕೂರಬೇಕೆಂದು ಯಾರು ಹೇಳಿದ್ದು? ಈಗ ಧರ್ಮಸ್ಥಳ ವಿರೋಧಿಗಳ  ಪ್ರಕಾರ ಧರ್ಮಸ್ಥಳದವರು ಚಕ್ಕುಲಿ ನುಂಗಿರ ಬಹುದು. ಆದರೆ ನಾವು? ನಾವು ಕೂಡ ಚಕ್ಕುಲಿ‌ ನುಂಗು ವವರೇ. ಆದರೆ ನಾವು ಒಮ್ಮೆಲೇ ನುಂಗಲ್ಲ. ಚಕ್ಕುಲಿಯ ಸುತ್ತಲಿನ ಸೈಡ್ ಸೈಡಿಂದ ಒಂದೊಂದೇ ಎಳೆಯನ್ನು ತಿನ್ನುತ್ತಾ ತಿನ್ನುತ್ತಾ ಇಡೀ ಚಕ್ಕುಲಿಯನ್ನು ತಿನ್ನುವ ಜಾತಿ ನಾವು. ತಿನ್ನುವುದು ಮತ್ತು ನುಂಗುವುದು ಎರಡೂ ಒಂದೇ ಅಲ್ವಾ?
   ಹಾಗೆಂದು ಸೌಜನ್ಯ ಎಂಬ ಹೆಣ್ಣು ಮಗುವಿಗೆ ಈ ಭರತ ಖಂಡದ ಮಣ್ಣಿನ ಕಾನೂನಿನಡಿಯಲ್ಲಿ ಇನ್ನು ನ್ಯಾಯ ಸಿಗಲ್ಲ ಕಣ್ರೀ. ಆ ನ್ಯಾಯದ ಹಾದಿ ತಪ್ಪಿ ಒಂದು ದಶಕವೇ ಕಳೆದು  ಹೋಗಿದೆ. ಇನ್ನು ಆ ಮಗುವಿಗೆ ನ್ಯಾಯ ಕೊಡಬೇಕಾಗಿದ್ದ ಅಣ್ಣಪ್ಪನ ಗುಡಿಯನ್ನು, ಮಂಜುನಾಥನ ಆಲಯವನ್ನು ಜೆಸಿಬಿ ತಂದು ಒಡೆದು ಹಾಕುವ ‌ಬಗ್ಗೆ ಮಾತಾಡಿದ್ದೇವೆ. ನಸುಕಿನ ಜಾವ ಧರ್ಮಸ್ಥಳಕ್ಕೆ ನುಗ್ಗಿ ಎಲ್ಲವನ್ನೂ ದೋಚುವ ಎಂಬ ಮಾತೂ ಬಂದಿದೆ.ದೈವ ನಿಂದಕರು ಮತ್ತು ಧರ್ಮ ದೂಷಣೆ ಮಾಡಿದವರು ನ್ಯಾಯ ಕೇಳಿದರೆ ಅಣ್ಣಪ್ಪ ಮತ್ತು ಮಂಜುನಾಥ ನ್ಯಾಯ ಕೊಡುತ್ತಾರಾ? ನ್ಯಾಯ ಸಿಗಲ್ಲ ಕಣ್ರೀ, ಯಾಕೆಂದರೆ ರಸ್ತೆ ರಸ್ತೆಗಳಲ್ಲಿ ನಿಂತು ದೈವ ನಿಂದನೆ ಮಾಡುವವರೊಂದಿಗೆ, ಧರ್ಮ ದೂಷಣೆ ಮಾಡುವವ ರೊಂದಿಗೆ ಅಕ್ರಮ ಕೂಟ ಸೇರಿಕ್ಕೊಂಡು ನಾವು ಆ ಮಗುವಿಗೆ ನ್ಯಾಯ ಕೇಳುತ್ತಿದ್ದೇವೆ. ಎಂಟು ನೂರು ವರ್ಷಗಳ ಹಿನ್ನೆಲೆ ಇರುವ, ವಿವಿಧ ಧಾರ್ಮಿಕ ಕಾರಣಗಳಿಗಾಗಿ ಈ ಭರತ ಖಂಡದಲ್ಲಿ ತನ್ನದೇ ವಿಶೇಷ ಕಾರಣಿಕಗಳಿಂದ ಹೆಸರು ವಾಸಿಯಾಗಿರುವ ಹಿಂದೂ ಶ್ರದ್ಧಾ ‌ಕೇಂದ್ರದ ಅಡಿಗಲ್ಲನ್ನೇ ಅಲುಗಾಡಿಸಿ ನ್ಯಾಯ ಕೇಳಿದರೆ ದೇವರು ಒಲಿಯುತ್ತಾನಾ? ನ್ಯಾಯ ಕೇಳುವ ಭರದಲ್ಲಿ ದೈವ ನಿಂದನೆ ಮಾಡಿ ಅಣ್ಣಪ್ಪ ಮತ್ತು ಮಂಜುನಾಥನ ಅಸ್ತಿತ್ವವನ್ನೇ ಪ್ರಶ್ನಿಸುವ ದೈವ ನಿಂದಕರ ಪರವಾಗಿ ಮಂಜುನಾಥನ ದೇವ ನ್ಯಾಯಾಲಯ ತೀರ್ಪು ಕೊಡುವ ಬಗ್ಗೆ ಅನುಮಾನಗಳಿವೆ. ಒಂದು ಕಡೆ ದೈವ ನಿಂದಕರು ಇನ್ನೊಂದು ಕಡೆ ಧರ್ಮ ನಡೆಸಿದವರು. ದೇವರು  ಯಾರ ಪರ ನಿಲ್ಲ ಬಹುದು?
   ಹಾಗೆಂದು ಸೌಜನ್ಯ ಪರ ಹೋರಾಟಗಾರರ ಟಾರ್ಗೆಟ್ ಯಾರು, ಅವರ ಮನಸ್ಸಿನಲ್ಲಿ ಏನಿದೆ, ಅವರ ಹಿಡನ್ ಅಜೆಂಡಾ ಏನು ಎಂಬುದು ಕೂಡ ಧರ್ಮಸ್ಥಳದ ದೈವ ದೇವರುಗಳ ದಿವ್ಯ ಜ್ಞಾನಕ್ಕೆ ಬರದ ವಿಷಯವೇನಲ್ಲ. ಸೌಜನ್ಯ ಪರ ವೇದಿಕೆಗಳಲ್ಲಿ ಸಿಗುವ ಪ್ರತೀ ಮುಖವೂ ಅವರ ಗೇಮ್ ಪ್ಲಾನ್ ಗಳ ಇಂಡಿಕೇಟ್ ಮಾಡುತ್ತಿದೆ. ಅವರು ಕೇಳುವ ನ್ಯಾಯದ ಹಿಂದೆ ಇನ್ನೂ ಏನೇನೋ ಇದೆ.
   ನಮಗೆ ನಮ್ಮ ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗದ ಮೇಲೆ ನಂಬಿಕೆ ಇಲ್ಲ. ಎಂಟು ನೂರು ವರ್ಷಗಳ ಇತಿಹಾಸ ಹೊಂದಿರುವ ಶ್ರದ್ಧಾ ‌ಕೇಂದ್ರದ ಮೇಲೆ ನಂಬಿಕೆ ಇಲ್ಲ, ದೈವ ದೇವರುಗಳ ಮೇಲೆ ನಂಬಿಕೆ ಇಲ್ಲ, ಒಂದು ವ್ಯವಸ್ಥಿತ ಅಸ್ತಿತ್ವದ ಮೇಲೆ ನಂಬಿಕೆ ಇಲ್ಲ. ಹಾಗಾದರೆ ನಮ್ಮ ಟಾರ್ಗೆಟ್ ಏನು?  ಟಾರ್ಗೆಟ್ ಒಂದೇ.
   ಸೌಜನ್ಯ ಸಮಾಧಿ ಮೇಲೆ ಸಾಮ್ರಾಜ್ಯ ಕಟ್ಟಲು ಹೊರಟವರು ನಾವು. ಸೌಜನ್ಯ ಬೆಂಕಿಯಲ್ಲಿ ಚಳಿ ಕಾಯಿಸಿ ಕೊಳ್ಳುವವರು ನಾವು. ಸೌಜನ್ಯ ಪ್ರಕರಣವನ್ನು ನಮ್ಮ ರಾಜಕೀಯ ಯಶಸ್ಸಿನ ಮೆಟ್ಟಿಲು ಮಾಡಿಕೊಂಡವರು ನಾವು. ಅದೆಲ್ಲ ಕಾರಣಗಳಿಗಾಗಿ ನಮ್ಮದೇ ಶ್ರದ್ಧಾ ಕೇಂದ್ರದ ಬಲಿ. ದೈವ ನಿಂದನೆ ಮಹಾ ಪಾಪ. ಧರ್ಮ ದೂಷಿಕರಿಗೆ, ದೈವ ನಿಂದಕರಿಗೆ ನ್ಯಾಯ ಸಿಗಲ್ಲ.


   

    











Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget