ಕಾಣಿಯೂರು - ಸುಬ್ರಹ್ಮಣ್ಯ ಇಂಟರ್ ಸ್ಟೇಟ್ ಹೈವೇಯ ಪಂಜ ಸೀಮೆ ಜಂಕ್ಷನ್ ನಲ್ಲಿ ಮೊನ್ನೆ ನಿನ್ನೆ ಎಲ್ಲಾ ಗಲಾಟೆಯೋ ಗಲಾಟೆ. ಲೋಕಸಭೆ ಮುಗ್ಸಿ ಬ್ಯಾನರ್, ಬಂಟಿಂಗ್ಸ್ ಎಲ್ಲಾ ಮಡಚಿ ಅಟ್ಟದಲ್ಲಿಟ್ಟು ಅಮ್ಮಬ್ಬಾ ಎಂದು ಕಾಲು ಚಾಚಿ, ಚಾಚಿ ಮಾಡಲು ಹೊರಟಿದ್ದ ಪಂಜದ ಪೊಲಿಟಿಕಲ್ ಲೀಡರ್ ಗಳಿಗೆ ಪೊಕ್ಕಡೆ ಬೊಬ್ಬೆ ಹೊಡೆಯಲು ಒಂದು ತುಂಡು ಮ್ಯಾಟರು ಸಿಕ್ಕಿಯೇ ಬಿಟ್ಟಿದೆ. ಮೊದಲು ಕಾಂಗ್ರೆಸಿಗರು ಪೋಲಿಸ್ ಗೆ ಹೋದರೆ ನಂತರ ದೇಶಭಕ್ತರು ಮಾರಿ ಓಡಿಸಿದರು.
ಇವರು ಸನ್ಮಾನ್ಯ ವೆಂಕಪ್ಪಣ್ಣ. ಪಂಜದಲ್ಲಿ ಫ್ಯಾನ್ಸಿ ಅಂಗಡಿ ಇಟ್ಟುಕೊಂಡಿದ್ದಾರೆ. ಪಾಪ ಅವರಷ್ಟಕ್ಕೆ ಅವರಿದ್ದರು. ಆದರೆ ಮೊನ್ನೆ ಲೋಕಸಭಾ ರಿಸಲ್ಟ್ ನೋಡಿ ಅದೆಲ್ಲಿತ್ತೋ ಪಿತ್ತ ವೆಂಕಪ್ಪಣ್ಣನ ನೆತ್ತಿಗೇರಿ ಬಿಟ್ಟಿತು. ಹಾಗೆಂದು ವೆಂಕಪ್ಪಣ್ಣನಿಗೆ ಮಾತ್ರ ಪಿತ್ತ ನೆತ್ತಿಗೇರಿದ್ದಲ್ಲ ಸಿಂಧೂ ನಾಗರೀಕತೆಯ ಜೀನ್ಸ್ ಇರುವ ನೂರು ಕೋಟಿಗೂ ಪಿತ್ತ ಕೆಜಲಿತ್ತು. ಆದರೆ ಪಂಜದಲ್ಲಿ ಮಾತ್ರ ವೆಂಕಪ್ಪಣ್ಣನ ಗ್ರಹಗತಿ ಕೆಟ್ಟಿತ್ತು. ದೇಶಭಕ್ತರಿಗೆ ಬಹುಮತ ಬಾರದ ಬೆಚ್ಚದಲ್ಲಿ ವಾಟ್ಸ್ ಆ್ಯಪ್ ತಗೊಂಡು ಕೈಗೆ ಸಿಕ್ಕಿದ್ದನ್ನೆಲ್ಲ ಗೀಚಿ ಸ್ಟೇಟಸ್ ಹಾಕಿಕೊಂಡಿದ್ದರು. ಇದನ್ನು ಕೌಂಟಿಂಗ್ ಮುಗಿದು ಮುಂದಿನ ಸಲ ಕಪ್ ನಮ್ಮದೇ ಎಂದು ಚಾಚಿ ಮಾಡಲು ಹೊರಟಿದ್ದ ಪಂಜ ಕಾಂಗ್ರೆಸಿಗರು ಇಣುಕಿ ನೋಡಿ ಬಿಟ್ಟರು. ಆ.....ಅಂದು ಬೊಬ್ಬೆ ಹಾಕಿಬಿಟ್ಟರು ಮತ್ತು ಸೀದಾ ಹೋಗಿ ಪೋಲಿಸ್ ದೂರು ಕೊಟ್ಟು ಬಿಟ್ಟರು. ಬೇಕಾ ವೆಂಕಪ್ಪಣ್ಣನಿಗೆ. ಕಾಲ್ ಬಂದೇ ಬಂತು ಪೋಲಿಸರಿಂದ. ಪಾಪ ವೆಂಕಪ್ಪಣ್ಣ ಹೋದರು ಸ್ಟೇಷನ್ ಗೆ. ಸರ್ವ ತಪ್ಪಿತು ಎಂದು ಪಂಜದ ಖಾದಿಗಳ ಮುಂದೆ ಮತ್ತು ಸುಬ್ರಹ್ಮಣ್ಯದ ಖಾಕಿಗಳ ಮುಂದೆ ಮುಚ್ಚಳಿಕೆ ಬರೆದು ಕ್ಷಮೆಯಾಚನೆ ಮಾಡಿ ಬಿಟ್ಟರು. ಕಾಂಗ್ರೆಸಿಗರಿಗೆ ಅಲ್ಲಿಗೆ ಕೇಸ್ ಮುಗಿಸಿ ಸುಮ್ಮನೆ ಕೂರ ಬಹುದಿತ್ತು. ಆದರೆ ಸರ್ಕಾರ ಉಂಟಲ್ಲ, ವೆಂಕಪ್ಪಣ್ಣನನ್ನು ಮತ್ತಷ್ಟು ಬಚ್ಚಿಸಲು ನೋಡಿದರು. ಕಾಂಗ್ರೆಸಿಗರ ವಿರುದ್ಧ ಬರೆದ ಪಾಪ ಪ್ರಾಯಶ್ಚಿತ್ತಕ್ಕಾಗಿ ಸ್ಟೇಷನ್ ಹೊರಗೆ ಬಂದು ಕಾಂಗ್ರೆಸಿಗರು ವೆಂಕಪ್ಪಣ್ಣನಿಗೆ ಕೆಲವೊಂದು ಕಂಡೀಷನ್ ಗಳನ್ನು ಹಾಕಿದರು. ಅದರಂತೆ ವೆಂಕಪ್ಪಣ್ಣ ಒಂದು ವಾರ ತನ್ನ ಅಂಗಡಿ ಬಂದ್ ಮಾಡ ಬೇಕು, ಅಂಗಡಿ ಮುಂದೆ ಕಾಂಗ್ರೆಸಿಗರಿಗೆ ಬಯ್ದ ಪಾಪ ಪ್ರಾಯಶ್ಚಿತ್ತಕ್ಕಾಗಿ ಅಂಗಡಿ ಬಂದ್ ಎಂದು ಬರೆಯ ಬೇಕು, ಲೋಕಲ್ ಪತ್ರಿಕೆಯಲ್ಲಿ ಕ್ಷಮೆ ಕೇಳಿ ಕಾಲಂ ಪ್ರಕಟಿಸ ಬೇಕು ಎಂಬಿತ್ಯಾದಿ ಅಂಡಿಗುಂಡಿ ಷರತ್ತುಗಳು. ಇಲ್ಲದಿದ್ದರೆ ವೆಂಕಪ್ಪಣ್ಣ ಒಳಗೆ ಎಂದು ಕೂಡ ಹೆದರಿಸಲಾಯಿತು. ಕಾಂಗ್ರೆಸ್ ಸರ್ಕಾರ ಉಂಟಲ್ಲ ಹೆದರಿ, ಬೆವರಿ, ಆಯ್ತು ಎಂದು ವೆಂಕಪ್ಪಣ್ಣ ದುಖಾನ್ ಕ್ಲೋಸ್ ಮಾಡಿ ಬಿಟ್ಟರು.
ಈ ವಿಷಯ ಮಂಡೆಬೆಚ್ಚದಲ್ಲಿ ನೈಂಟಿ, ಸಿಕ್ಸ್ ಟಿ ಹಾಕಿ ಮಲಗಿದ್ದ ದೇಶಭಕ್ತರಿಗೆ ಗೊತ್ತಾಯಿತು. ಓ...... ಪಂಜ ಮುಳುಗಿತು ಎಂಬಂತೆ ಎದ್ದು ಬಿಟ್ಟರು. ರಾತ್ರೋರಾತ್ರಿ ಸಭೆ ಕೂತು, ವೆಂಕಪ್ಪಣ್ಣನಿಗೆ ಗಾಳಿ ಹಾಕಿ ಮರುದಿನವೇ ಅಂಗಡಿ ಓಪನ್ ಮಾಡಿಸಿ ಬಿಟ್ಟರು. ಅದರ ಮರುದಿನ ಪಂಜದಲ್ಲಿ ದೊಡ್ಡ ಪ್ರತಿಭಟನೆ. ಅಮಾಯಕರ ಮೇಲೆ ಕಾಂಗ್ರೆಸ್ ದಬ್ಬಾಳಿಕೆ ಮಾಡುತ್ತಿದೆ ಎಂದು ದೊಡ್ಡ ಸಭೆ. ಸಭೆಯಲ್ಲಿ ಕಡಬ, ಗುತ್ತಿಗಾರು, ಸುಳ್ಯ ಕಡೆಯ ದೇಶಭಕ್ತರಿಂದ ಕಿವಿಯ ಹೂ ಹರಿದು ಹೋಗುವಷ್ಟು ಬೊಬ್ಬೆಯೋ ಬೊಬ್ಬೆ. ಇದೀಗ ಎರಡೂ ಪಾರ್ಟಿಗಳ BP ಡೌನ್ ಗೆ ಬಂದಿದೆ. ವೆಂಕಪ್ಪಣ್ಣನಿಗಂತೂ ಪಾಪ ಮೊಬೈಲ್ ಕಂಡರೆ ಸಾಕು ಅಲ್ಕಿ ಬೀಳುವ ಪರಿಸ್ಥಿತಿ.
ಹಾಗೆಂದು ಇಲ್ಲಿ ದೇಶ ಭಕ್ತರ ಎಂಟ್ರಿ ಅಗತ್ಯವೇ ಇರಲಿಲ್ಲ. ಯಾಕೆಂದರೆ ವೆಂಕಪ್ಪಣ್ಣ ಹಿಂದೂಗಳಿಗೂ ಅವೈಜ್ಞಾನಿಕ ಪದ ಪ್ರಯೋಗ ಮಾಡಿದ್ದರು. ಹಿಂದೂಗಳ ಜೀನ್ಸನ್ನೇ ಪ್ರಶ್ನೆ ಮಾಡಿದ್ದರು. ಹಾಗೇನಾದರೂ ದೇಶಭಕ್ತರಿಗೆ ಈ ಬಗ್ಗೆ ತಗಡ್ ಬೆಚ್ಚ ಆಗಿದ್ದರೆ ಸೀದಾ ಹೋಗಿ ಪೋಲಿಸ್ ಕಂಪ್ಲೇಂಟ್ ಕೊಡ ಬೇಕಿತ್ತು, ವೆಂಕಪ್ಪಣ್ಣನನ್ನು ಪೋಲಿಸ್ ಬ್ಯಾಂಡಲ್ಲಿ ಠಾಣೆಗೆ ಕರೆಸ ಬೇಕಿತ್ತು. ಆದರೆ ದೇಶಭಕ್ತರಿಗೆ ಹಿಂದೂಗಳಿಗೆ ಬರೆದ ಬಗ್ಗೆ ಬೆಚ್ಚ ಇರಲಿಲ್ಲ ಬದಲಾಗಿ ಕಾಂಗ್ರೆಸಿಗರ ವಿರುದ್ಧ ಬೆಚ್ಚ ಇತ್ತು ಅದಕ್ಕೆ ಪ್ರತಿಭಟನೆ, ಬೊಬ್ಬೆ, ಗಲಾಟೆ ಎಲ್ಲಾ. ವೆಂಕಪ್ಪಣ್ಣ ಹಿಂದೂಗಳ ಬಗ್ಗೆ ಬರೆದ ಲೆಕ್ಕದಲ್ಲಿ ದೇಶಭಕ್ತರು ಅವರ ಚಳಿ ಬಿಡಿಸಿ ಬೆವರಿಳಿಸ ಬೇಕಾಗಿತ್ತು. ಆದರೆ ಕಾಂಗ್ರೆಸ್ಸಿಗರು ವೆಂಕಪ್ಪಣ್ಣನಿಗೆ ವಿರುದ್ಧ ಇದ್ದಾರಲ್ಲ ಅದಕ್ಕೆ ದೇಶಭಕ್ತರು ವೆಂಕಪ್ಪಣ್ಣನ ಪಾರ್ಟಿ. ಹಾಗಾದರೆ ಕಾಂಗ್ರೆಸಿಗೆ ವಿರುದ್ಧ ಇದ್ದವನು ಹಿಂದೂಗಳಿಗೆ ಏನು ಬೇಕಾದರೂ ಬರೆಯ ಬಹುದಾ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆ.
ಇನ್ನು ಈ ಪಂಜ ಕಾಂಗ್ರೆಸಿಗರು ಕೂಡ ವೆಂಕಪ್ಪಣ್ಣನಿಗೆ ಕೊಟ್ಟ ಮದ್ದು ಓವರ್ ಡೋಸ್ ಆಯ್ತು. ಪೋಲಿಸ್ ಕಂಪ್ಲೇಂಟ್ ಮತ್ತು ಮುಚ್ಚಳಿಕೆಯಲ್ಲಿಯೇ ವೆಂಕಪ್ಪಣ್ಣನ ಸಾಧಾರಣ ಎಲ್ಲಾ ಸೀಕ್ ಗಳೂ ಗುಣಮುಖದತ್ತ ಇತ್ತು. ಠಾಣೆಯಿಂದ ಹೊರಗೆ ಬಂದು ಅಂಗಡಿ ಬಂದ್ ಮಾಡು, ಕ್ಷಮೆ ಕೇಳು, ಪತ್ರಿಕೆಯಲ್ಲಿ ಕ್ಷಮೆ ಕೇಳು ಎಂದೆಲ್ಲಾ ಕಂಡೀಷನ್ ಹಾಕಿದ್ದು ಕೇರಳ ಸ್ಟೈಲ್ ಆಯ್ತು. ಕೇರಳ ಸ್ಟೈಲ್ ಪಂಜದಲ್ಲಿ ನಡೆಯೋದು ಸ್ವಲ್ಪ ಕಷ್ಟ ಕಷ್ಟ ಅಂತ ಕಾಂಗ್ರೆಸ್ ಬಿ ಟೀಂ, ಎ ಟೀಂ ಎರಡಕ್ಕೂ ಈಗೀಗ ಅರಿವಾಗುತ್ತಿದೆ ಎಂದು ತಿಳಿದುಬಂದಿದೆ. ಇನ್ನು ಒಂದು ವಾರ ಅಂಗಡಿ ಬಂದ್ ಮಾಡಿದರೆ ಊಟಕ್ಕೆ ಏನು ಮಾಡಲಿ ಎಂದು ಕಾಂಗ್ರೆಸಿಗರಲ್ಲಿ ವೆಂಕಪ್ಪಣ್ಣ ಕೇಳಿದಾಗ " ಊಟಕ್ಕೆ ದೇವಸ್ಥಾನಕ್ಕೆ ಬಾ, ಅಲ್ಲಿ ಡೈನಿಂಗ್ ಹಾಲ್ ನಲ್ಲಿ ಕೆಲಸವೂ ಉಂಟು, ಊಟವೂ ಉಂಟು" ಎಂದು ಅಂದಿದ್ದರಂತೆ ಪಂಜದ ಜನಪ್ರಿಯ ಕಾಂಗ್ರೆಸ್ ನಾಯಕರೊಬ್ಬರು. ಪಂಜ ದೇವಸ್ಥಾನ ಪ್ರೈವೇಟಾ?
Post a Comment