ನಿಮಗೆ ಒಮ್ಮೆಗೆ ಬೇಕಾದರೆ ಮಿನಿ ವಿಧಾನಸೌಧ, ಪೋಲಿಸ್ ಠಾಣೆ, ಬಸ್ ನಿಲ್ದಾಣದ ಹೀಗೆ ಯಾವುದನ್ನು ಬೇಕಾದರೂ ರಿಜಿಸ್ಟರ್ ಮಾಡಿಕೊಡುವಷ್ಟು ಪರಮ ಭ್ರಷ್ಟರು ಕಂದಾಯ ಇಲಾಖೆಯಲ್ಲಿ ಇದ್ದಾರೆ. ಯಾರದೋ ಆಸ್ತಿ ಯಾರಿಗೋ, ಸರ್ಕಾರಿ ಭೂಮಿಗಳ ಹಂಚಿಕೆ, ಲಂಚಾವತಾರದಿಂದ ಕಂದಾಯ ಇಲಾಖೆ ಘಮ ಘಮ ಬರುತ್ತಿದೆ. ಎಷ್ಟು ಸ್ಟ್ರಿಕ್ಟ್ ಮಾಡಿದರೂ ಸ್ಟ್ರಿಕ್ಟ್ ನಿಲ್ಲಲ್ಲ. ಇದು ಸುಳ್ಯ ಕಂದಾಯ ಇಲಾಖೆಯ ಕತೆ. ಐದು ಮಕ್ಕಳಿದ್ದ ಫ್ಯಾಮಿಲಿಯಲ್ಲಿ ನಕಲಿ ಸಂತತಿ ನಕ್ಷೆ ತಯಾರಿಸಿ ಒಬ್ಬಳೇ ಮಗಳು ಜಾಗ ಒಳಗೆ ಹಾಕಿದ ಕತೆ ಇದು. ಈ ಕೇಸಲ್ಲಿ ಯಾರೆಲ್ಲ ಒಳಗೆ ಹೋಗುತ್ತಾರೆ ಎಂದು ಇನ್ನೂ ನಿಘಂಟಾಗಿಲ್ಲ.
ಅದು ಅಂದಾಜು ಐವತ್ತೈದು ವರ್ಷಗಳ ಹಿಂದಿನ ಕತೆ. ಪದ್ಮಯ್ಯ ಗೌಡ ಎಂಬವರು ಸುಳ್ಯ ತಾಲೂಕಿನ ಉಬರಡ್ಕ ಮಿತ್ತೂರು ಗ್ರಾಮದ ಬಡ್ಡೇಕಲ್ಲು ಎಂಬಲ್ಲಿಗೆ ಬಂದು ಸರ್ಕಾರಿ ಜಾಗದಲ್ಲಿ ಒಂದು ಮನೆ ಕಟ್ಟಿ ಜೀವನ ನಡೆಸಲು ಆರಂಭಿಸುತ್ತಾರೆ.ಅನಂತರ ಸುಮಾರು 25 ವರ್ಷಗಳ ನಂತರ ಸುಮಾರು ಎರಡೂವರೆ ಎಕರೆ ಜಾಗವು ಪದ್ಮಯ್ಯ ಗೌಡರ ಹೆಸರಿಗೆ ದರ್ಖಾಸ್ತು ಮೂಲಕವೋ ಅಥವಾ ಅಕ್ರಮ ಸಕ್ರಮ ಮುಖಾಂತರವೋ ಬಂದಿರುತ್ತದೆ. ಈ ಪದ್ಮಯ್ಯ ಗೌಡರಿಗೆ ಐದು ಜನ ಮಕ್ಕಳು. ಹರಿಶ್ಚಂದ್ರ ಗೌಡ, ಪುಷ್ಪಾವತಿ ಗೌಡ, ಕುಶಾಲಪ್ಪ ಗೌಡ, ವಿಜಯ ಲಕ್ಷ್ಮಿ ಮತ್ತು ದೇವಿ ಕುಮಾರಿ. ಈ ಪದ್ಮಯ್ಯ ಗೌಡರು ಹುಟ್ಟು ಅಂಗವಿಕಲ. ಆದರೂ ತನ್ನ ಪುಟ್ಟ ಫ್ಯಾಮಿಲಿಗಾಗಿ ಬೆವರು ಸುರಿಸಿ ದುಡಿಯುತ್ತಿದ್ದರು. ಮಕ್ಕಳು ಬೆಳೆದು ದೊಡ್ಡವರಾದಗ ಮೊದಲ ಮಗ ಹರಿಶ್ಚಂದ್ರ ಕಾಂತಮಂಗಲದ ಹೆಣ್ಣೊಬ್ಬಳನ್ನು ಮದುವೆ ಆಗಿ ಮನೆ ಬಿಟ್ಟು ಹೊರಟು ಹೋಗುತ್ತಾರೆ. ಈ ಸಮಯದಲ್ಲಿ ಗೌಡರ ಎರಡನೇ ಮಗಳು ಪುಷ್ಪಾವತಿಯೂ ಮದುವೆ ಪ್ರಾಯಕ್ಕೆ ಬಂದಿದ್ದು ಅವಳ ಜವಾಬ್ದಾರಿ ತೆಗೆದುಕೊಳ್ಳಲು ಬೇರೆ ಯಾರೂ ಇಲ್ಲದ ಕಾರಣ ಆಕೆ ಕೇರಳದ ವ್ಯಕ್ತಿಯೊಬ್ಬರನ್ನು ಮದುವೆ ಆಗುತ್ತಾರೆ ಮತ್ತು ತವರಿನಲ್ಲೇ ಬೇರೆ ಚಿಕ್ಕ ಮನೆ ಮಾಡಿ ವಾಸ್ತವ್ಯ ಮಾಡುತ್ತಾರೆ. ನಂತರ ಬೇಂಗಮಲೆಯಲ್ಲಿ ನಡೆದ ಅಪಘಾತ ಒಂದರಲ್ಲಿ ಪುಷ್ಪಾವತಿ ಗಂಡ ತೀರಿಕೊಂಡು ಪುಷ್ಪಾವತಿ ಮತ್ತು ಅವರ ಇಬ್ಬರು ಹೆಣ್ಣು ಮಕ್ಕಳು ಸುಜಾತಾ ಮತ್ತು ದಿವ್ಯಾ ಅನಾಥರಾಗುತ್ತಾರೆ. ನಂತರ ಅನಾರೋಗ್ಯ ಪೀಡಿತರಾಗಿ ಪುಷ್ಪಾವತಿಯವರೂ ಮರಣ ಹೊಂದುತ್ತಾರೆ. ಇಬ್ಬರು ಹೆಣ್ಣು ಮಕ್ಕಳನ್ನು ಅಜ್ಜಿ ಪುತ್ತೂರು ರಾಮಕೃಷ್ಣ ಆಶ್ರಮಕ್ಕೆ ಹಾಕುತ್ತಾರೆ.
ಇನ್ನು ಪದ್ಮಯ್ಯ ಗೌಡರ ಇನ್ನೊಬ್ಬಳು ಮಗಳು ವಿಜಯಲಕ್ಷ್ಮಿ ಪ್ರೇಂ ಕುಮಾರ್ ನಾಯ್ಕ್ ಎಂಬವರನ್ನು ಮದುವೆ ಆಗಿದ್ದರು. ಕುಶಾಲಪ್ಪ ಗೌಡ್ರು ಸಕಲೇಶಪುರದ ಕಡೆ ಹೋಗಿ ಅಲ್ಲಿಯೇ ಮದುವೆ ಆಗಿ ಸೆಟಲ್ ಆದರೆ, ಕೊನೆಯ ಮಗಳು ದೇವಿ ಇನ್ಯಾರನ್ನೋ ಮದುವೆ ಆಗುತ್ತಾರೆ. ಇಲ್ಲಿ ವಿಜಯ ಲಕ್ಷ್ಮಿ ಗಂಡ ಪ್ರೇಂ ಕುಮಾರ್ ಎಂಬವರು ಮದುವೆ ಸಮಯದಲ್ಲಿ ಎರಡು ಲಕ್ಷ ವರ ದಕ್ಷಿಣೆ ಕೇಳಿದರೆಂದೂ, ಪದ್ಮಯ್ಯ ಗೌಡರ ಬಳಿ ಅಷ್ಟೊಂದು ದುಡ್ಡಿಲ್ಲದ ಕಾರಣ ಮದುವೆಗೆ ಒಪ್ಪಿಗೆ ಕೊಡಲಿಲ್ಲವೆಂದೂ, ಆಗ ಪದ್ಮಯ್ಯ ಗೌಡರ ಹೆಂಡತಿ ಗಿರಿಜಾ ಮತ್ತು ಸ್ವತಃ ವಿಜಯ ಲಕ್ಷ್ಮಿ ಮನೆಯ ಕಾಗದ ಪತ್ರಗಳನ್ನು ಗೌಡರಿಗೆ ಗೊತ್ತಿಲ್ಲದಂತೆ ತಂದು ಸುಳ್ಯದ ಜಾಗದ ಬ್ರೋಕರ್ ರಾಜ ಎಂಬಾತನ ಕೈಲಿ ಕೊಡುತ್ತಾರೆ.
ಹಾಗೆ ಸುಳ್ಯದ ಬ್ರೋಕರ್ ರಾಜನ ಕೈಗೆ ಯಾವಾಗ ಪದ್ಮಯ್ಯ ಗೌಡರ ಜಾಗದ ಫೈಲ್ ಸಿಗುತ್ತೋ ಅವನು ಆ ಜಾಗವನ್ನು ಕಣ್ಣನ್ ಎಂಬವರಿಗೆ ಅಗ್ರಿಮೆಂಟ್ ಮಾಡಿಸುತ್ತಾನೆ .ಒಂದು ಲಕ್ಷದ ಇಪ್ಪತ್ತು ಸಾವಿರ ದುಡ್ಡು ಗಿರಿಜಾ ಮತ್ತು ವಿಜಯಲಕ್ಷ್ಮೀಯವರಿಗೆ ಕೊಡಿಸಿ ಉಳಿದ ಎಂಬತ್ತು ಸಾವಿರ ದುಡ್ಡು ರಿಜಿಸ್ಟ್ರೇಷನ್ ಸಮಯದಲ್ಲಿ ಎಂದು ಅಗ್ರಿಮೆಂಟ್ ಮಾಡಿಸಲಾಗುತ್ತದೆ. ಆದರೆ ಈ ವಿಷಯ ತಿಳಿದ ಪದ್ಮಯ್ಯ ಗೌಡರು ಗಲಾಟೆ ಮಾಡಿ ಮನೆ ಬಿಟ್ಟು ಹೋಗುತ್ತಾರೆ ಮತ್ತು ಅವರ ಒಪ್ಪಿಗೆ ಇಲ್ಲದೆ ಕಣ್ಣನ್ ಗೆ ರಿಜಿಸ್ಟ್ರೇಷನ್ ಆಗುವುದಿಲ್ಲ. ಹಾಗೆ ವರುಷಗಳ ಕಾಲ ಜಾಗದಲ್ಲಿದ್ದ ಕಣ್ಣನ್ ಒಂದು ದಿನ ಇದು ಕತೆ ಮುಗಿಯಲ್ಲ ಎಂದು ಮನೆ ಕೆಡವಿ ಜಾಗ ಖಾಲಿ ಮಾಡುತ್ತಾರೆ. ಮುಂದೆ 2015 ಇಸವಿಯಲ್ಲಿ ಪದ್ಮಯ್ಯ ಗೌಡರು ಮರಣ ಹೊಂದುತ್ತಾರೆ. ಅಲ್ಲಿಗೆ ಮೂಲ ಕತೆ ಮುಗಿಯುತ್ತದೆ.
ಈಗ ವಿಷಯ ಏನೆಂದರೆ ಅಲ್ಲಿ ಪುಷ್ಪಾವತಿಯವರ ಇಬ್ಬರು ಮಗಳಂದಿರು ಆಶ್ರಮದಲ್ಲಿದ್ದರಲ್ಲ ಅವರು ಮೇಜರ್ ಗೆ ಬಂದು ಅಜ್ಜಿಯಲ್ಲಿ ತಮ್ಮ ಜಾಗದ ಬಗ್ಗೆ ವಿಚಾರಿಸುತ್ತಾರೆ. ಅಜ್ಜಿ ತನ್ನ ಮೊಮ್ಮಗಳಲ್ಲಿ ಮೂಲ ಕತೆ ಹೇಳುತ್ತಾಳೆ. ಹಾಗೆ ಪುಷ್ಪಾವತಿಯವರ ಎರಡನೇ ಮಗಳು ದಿವ್ಯ ಬಡೇಕಲ್ಲಿನ ಜಾಗಕ್ಕೆ ಹೋಗಿ ಜೆಸಿಬಿ ಮೂಲಕ ಕೆಲಸ ಮಾಡಿಸುತ್ತಾಳೆ. ಈ ವಿಷಯ ತಿಳಿದ ವಿಜಯಲಕ್ಷ್ಮಿ ಮೈಸೂರಿನಿಂದ ಓಡಿ ಬಂದು ಜಾಗದ ಡೂಪ್ಲಿಕೇಟ್ ಡಾಕ್ಯುಮೆಂಟ್ ರೆಡಿ ಮಾಡಲು ಸ್ಕೆಚ್ ಹಾಕುತ್ತಾಳೆ.
ಹಾಗೆ ವಿಜಯಲಕ್ಷ್ಮಿ ಗ್ಯಾಂಗ್ ಮೊದಲು ಪೊರ್ಜರಿ ಸಂತತಿ ನಕ್ಷೆ ರೆಡಿ ಮಾಡುತ್ತದೆ. ಆ ಸಂತತಿ ನಕ್ಷೆಯಲ್ಲಿ ಪದ್ಮಯ್ಯ ಗೌಡರ ಉಳಿದ ನಾಲ್ಕು ಮಕ್ಕಳನ್ನು ಹೈಡ್ ಮಾಡಿ ಕೇವಲ ವಿಜಯಲಕ್ಷ್ಮಿಯನ್ನು ಮಾತ್ರ ಮಗಳು ಎಂದು ತೋರಿಸಲಾಗುತ್ತದೆ. ನಂತರ ತಾಲೂಕು ಆಫೀಸಿನ, ರಿಜಿಸ್ಟರ್ ಆಫೀಸಿನ ಅಷ್ಟೂ ಭೂತಗಳಿಗೆ, ಕುಲೆಗಳಿಗೆ ಬಡಿಸಿ ಆ ಮೂಲಕ ಎಲ್ಲಾ ಎರಡೂವರೆ ಎಕರೆ ಜಾಗವನ್ನು ವಿಜಯಲಕ್ಷ್ಮಿ ತನ್ನ ಹೆಸರಿಗೆ ರಿಜಿಸ್ಟ್ರೇಷನ್ ಮಾಡಿಸಿಕೊಂಡು ವಾಪಾಸ್ ಮೈಸೂರು ಬಸ್ ಹತ್ತಿ ಬಿಡುತ್ತಾಳೆ. ಈ ಬಗ್ಗೆ ಪೋರ್ಜರಿ ಸಂತತಿ ನಕ್ಷೆ ಮಾಡಿದ ಉಬರಡ್ಕ ಮಿತ್ತೂರು ಗ್ರಾಮದ ವಿಲೇಜ್ ಅಕೌಂಟೆಂಟ್ A1 ಆರೋಪಿಯಾಗಿದ್ದು ಅವನಿಗೆ ಎಷ್ಟು ಸಂದಾಯ ಆಗಿದೆ ಎಂಬ ಲೆಕ್ಕ ಇದೆ. ಇನ್ನು ಸುಳ್ಯದ ಆಗಿನ ತಹಶೀಲ್ದಾರ್ ಗೆ ಕೂಡ ನಾಲ್ಕು ಸೊನ್ನೆಗಳ ದೊಡ್ಡ ಮೊತ್ತದಲ್ಲಿ ಬಡಿಸಲಾಗಿದೆ ಎಂದು ಸುದ್ದಿ ಇದೆ. ಇನ್ನು ಈ ಕತೆಯಲ್ಲಿ ತಿಪ್ಪೇಸ, ಮಂಜುನಾಥ ಮುಂತಾದವರೂ ಎಂಟ್ರಿ ಹಾಕಿದ್ದು ಅಕ್ರಮದಲ್ಲಿ ಅವರೂ ಪಾಲುದಾರರು ಎಂದು ತಿಳಿದುಬಂದಿದೆ.
ಹಾಗೆಂದು ಈ ಒಂದು ಅಕ್ರಮದ ಬಗ್ಗೆ ಸಮಗ್ರ ತನಿಖೆ ಆಗಬೇಕಾಗಿದೆ. ಅದು ಜಾಗ ಸ್ವಯಾರ್ಜಿತ ಆಗಿದ್ದರೂ ಪದ್ಮಯ್ಯ ಗೌಡರು ಅದನ್ನು ಯಾರಿಗೂ ಬರೆದು ಕೊಟ್ಟಿಲ್ಲ. ಹಾಗಿರುವಾಗ ಅವರ ಮರಣಾನಂತರ ಆ ಜಾಗಕ್ಕೆ ಅವರ ಐವರೂ ಮಕ್ಕಳೂ ಸಮಾನ ಹಕ್ಕುದಾರರು. ಒಂದು ವೇಳೆ ಆ ಹಕ್ಕುದಾರರು ಮರಣ ಹೊಂದಿದ್ದರೆ ಅವರ ಮಕ್ಕಳಿಗೆ ಕೂಡ ರೈಟ್ಸ್ ಬರುತ್ತದೆ ಮತ್ತು ಮೊಮ್ಮಕ್ಕಳಿಗೆ ಅದು ಪಿತ್ರಾರ್ಜಿತ ಆಸ್ತಿ ಆಗಿರುತ್ತದೆ. ಹೀಗಿರುವಾಗ ವಿಜಯಲಕ್ಷ್ಮಿ ಒಬ್ಬರೇ ಪದ್ಮಯ್ಯ ಗೌಡರ ಹಕ್ಕುದಾರರು ಎಂದು ತೋರಿಸಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ರಿಜೀಸ್ಟ್ರೇಷನ್ ಮಾಡಿದ್ದು ಕ್ರಿಮಿನಲ್ ಅಫೆನ್ಸ್. ಇಲ್ಲಿ ಯಾರೆಲ್ಲ ಒಳಗೆ ಹೋಗಬಹುದು ಎಂಬುದು ಇನ್ನಷ್ಟೇ ನಿಘಂಟ್ ಆಗಬೇಕಿದೆ. ಈ ಬಗ್ಗೆ ಪದ್ಮಯ್ಯ ಗೌಡರ ಮೊಮ್ಮಗಳು ದಿವ್ಯ ಕಾನೂನು ಹೋರಾಟಕ್ಕೆ ಮುಂದಾಗಿದ್ದು ಲಂಚಕೋರ ಅಧಿಕಾರಿಗಳ ಎದೆಯಲ್ಲಿ ಐದು ಹೆಚ್ ಪಿ ಪಂಪು ಸ್ಟಾರ್ಟ್ ಆಗಿದೆ.
LATEST
ಸಂಪಾಜೆ ಮೀನು ಮಾರುಕಟ್ಟೆಯಲ್ಲಿ ಗುಜಿರಿ ಅಂಗಡಿಪಂಜ ಅಮೃತ ಮಹೋತ್ಸವದ ದುಡ್ಡು ಕೊಳೆಯುತ್ತಿದೆ!ಬೆಳ್ತಂಗಡಿಯಲ್ಲಿ ಪಂಚಾಯತ್ ರಾಜ್ ಮತ್ತು ಪೌರಾಡಳಿತ ಇಲಾಖೆ ಮರ್ಜ್?ಬೆಳ್ತಂಗಡಿ ಟೋಕನ್ ಸಿಸ್ಟಂಗೆ ಮೋಕ್ಷ ಕೊಡಿಬೆಳ್ಳಾರೆಯಲ್ಲಿ fake ಆನ್ ಲೈನ್ ಟ್ರೇಡಿಂಗ್! ಫೈನಾನ್ಸ್ ಗಳಿಗೆ ಹರಿದು ಬಂದ ಐದು ಕೆಜಿ ಬಂಗಾರ!WANTED ಮೊಟ್ಟೆ?ಪುತ್ತೂರು: ಭಟ್ರು ವರ್ಸಸ್ ಅಂಡಿಗುಂಡಿ ಭಟ್ರುಎಡಮಂಗಲ ಸರ್ಕಾರಿ ಕಾರ್ಯಕ್ರಮದಲ್ಲಿ ತಾಮರೆ ಚಿಹ್ನೆ!ಸುಳ್ಯ, ಪುತ್ತೂರು, ಬೆಳ್ತಂಗಡಿ ಬಾರ್ ಗಳಲ್ಲಿ ಕುರಿ ಮಾಲು!
ಸುಳ್ಯ: ಪೋರ್ಜರಿ ಸಂತತಿ ನಕ್ಷೆ ಮಾಡಿ ಆಸ್ತಿ ಗುಳುಂ
Pattler News
Bureau Report
