
ಕಡಬ ತಾಲೂಕ ಎಡಮಂಗಲ ಗ್ರಾಮದ ರೈಲು ಸ್ಟೇಷನ್ ಬಳಿ ಇತ್ತೀಚಿನ ದಿನಗಳಲ್ಲಿ ನೈಟ್ ಬಾಗಿಲು ಬಡಿಯುವ ಶಬ್ದ ಕೇಳಿಸುತ್ತಿರುವ ಬಗ್ಗೆ ಮಾಹಿತಿ ಬಂದಿದೆ. ಎಡಮಂಗಲದಲ್ಲಿ ಬ್ರಹ್ಮರಕ್ಕಸ ಮತ್ತೇ ಸಕ್ರೀಯನಾಗಿದ್ದಾನೆಯಾ?
ಹಾಗೆಂದು ಬಹಳ ಹಿಂದೆ ಎಡಮಂಗಲದಲ್ಲಿ ಒಬ್ಬ ಬ್ರಹ್ಮರಕ್ಕಸ ಇದ್ದನಂತೆ. ಊರಿಗೆ ಭಾರೀ ಉಪಟಳ ಕೊಟ್ಟಿದ್ದ ಬ್ರಹ್ಮ ರಕ್ಕಸ ಸ್ಥಳೀಯ ದೇವಸ್ಥಾನದಲ್ಲಿ ಬ್ರಹ್ಮ ಕಲಶ ಆದ ಮರುದಿನದಿಂದಲೇ ಎಡಮಂಗಲದಿಂದ ಜಾಗ ಖಾಲಿ ಮಾಡಿ ಇತ್ತ ಮನೆಗೂ ಹೋಗದೆ, ಅತ್ತ ಆಫೀಸಿಗೂ ಹೋಗದೆ ಕಾಣೆಯಾಗಿದ್ದ. ಜನರಿಗೆ ಖುಷಿಯೋ ಖುಷಿ ಆಗಿತ್ತು. ಬದುಕಿದೆಯಾ ಬಡ ಜೀವ ಅಂತ ಜನ ಪೊಯಿಂಬುಸಿರ್ ಬಿಟ್ಟಿದ್ದರು. ಈಗ ಮತ್ತೇ ಬಾಗಿಲು ಬಡಿಯುವ ಶಬ್ದ. ಎಡಮಂಗಲದ ರೈಲು ಸ್ಟೇಷನ್ ಬಳಿ ಇರುವ ಕೆಲವು ಮನೆಗಳ ಬಾಗಿಲು.
ಅಲ್ಲಿ ಎಡಮಂಗಲದ ರೈಲು ನಿಲ್ದಾಣದ ಬಳಿ ನೈಟ್ ಒಂದೆರಡು ಮನೆಗಳ ಬಾಗಿಲು ಬಡಿಯುವ ಘಟನೆ ನಡೆದಿದೆ. ನೈಟ್ ತುಂಬಾ ಸರಿದ ಮೇಲೆ ಗೀತ ಮಲಗಿ ಭೂತ ಏಳುವ ಸಮಯದಲ್ಲಿ ಬಾಗಿಲು ಬಡಿದ ಶಬ್ದ ಕೇಳಿಸುತ್ತಿದೆ. ಹಾಗೆಂದು ಈ ಬಾಗಿಲು ಬಡಿಯುವ ಶಬ್ದ ಮಾಮೂಲಾಗಿ ಭೂತಗಳ/ಕುಲೆ ಪೀಡೆ ಪಿಶಾಚಿಗಳ/ಬ್ರಹ್ಮ ರಕ್ಕಸನ/ ಇತರೇ ಭೂತ ಸಂಬಂಧಿತ ಅಜನೆಯಂತೆ ರೆಕ್ಲೆಸ್ಸಾಗಿ, ದಡಬಡ ದಡಬಡ ಸೌಂಡಿನಲ್ಲಿ ಮನೆಯವರೆಲ್ಲ ಬೆಚ್ಚಿ ಬೀಳುವಂತೆ ಶಬ್ದ ಬರುತ್ತಿಲ್ಲ. ಇಲ್ಲಿ ಈಗ ಬಾಗಿಲು ಬಡಿಯುವ ಸದ್ದು ತುಂಬಾ ಸ್ಮೂತಾಗಿ, ಶಾಂತವಾಗಿ, ಇಂಪಾಗಿ, ಲಕ್ಷ್ಮೀಕಾಂತ್ ಪ್ಯಾರೇಲಾಲನ ಸ್ಯಾಡ್ ಸಾಂಗಿನ ಅಲೆ ಅಲೆಯಂತೆ, ಯಾರೂ ಓಡಿ ಬಂದು ಬಾಗಿಲು ತೆಗೆಯುವಷ್ಟು ಮೃದುವಾಗಿ, ಸುಲಲಿತವಾಗಿ ಬಾಗಿಲು ಬಡಿಯುತ್ತಾರೆ ಎಂದು ತಿಳಿದುಬಂದಿದೆ. ಇದು ಎಡಮಂಗಲಕ್ಕೂ ಹೋಗದೆ, ಮನೆಗೂ ಬರದೆ ಕಾಣೆಯಾದ ಬ್ರಹ್ಮ ರಕ್ಕಸ ಅಲ್ಲ. ಅವನಿಗೆ ಅಷ್ಟೆಲ್ಲ ಇಂಪಾಗಿ ಬಾಗಿಲು ಬಡಿಯಲು ಬರಲ್ಲ, ತಾಳ್ಮೆಯೂ ಇಲ್ಲ, ಗೊತ್ತೂ ಇಲ್ಲ. ಹಾಗಾದರೆ ಯಾರು ಯಾರು ಎಂದು ವಿಚಾರಿಸಲಾಗಿ ಕೆಲವು ದಿನಗಳ ಹಿಂದೆ ಬ್ರಹ್ಮರಕ್ಕಸನ ರಿಲೇಟಿವ್ ಒಬ್ಬ ಸಿಕ್ಕಿ ಬಿದ್ದಿದ್ದಾನೆ. ಯಾಕೆ ನೈಟ್ ಬಂದು ಬಾಗಿಲು ಬಡಿದೆ ಎಂದು ಚಳಿ ಬಿಡಿಸಲಾಗಿ “ಬಚ್ಚಿರೆ ಕೇಳಲು ಬಂದಿದ್ದೆ” ಎಂದು ರೈಲು ಬಿಟ್ಟಿದ್ದ. ಅಲ್ಲಾ ಮಾರಾಯ್ರೆ ರಾತ್ರಿ ಹನ್ನೆರಡು ಗಂಟೆಗೆ ಇವನಿಗೆ ಬಚ್ಚಿರೆ ಯಾಕೆ? ಪೋಕಾಲ ಅಲ್ವಾ ಇವನಿಗೆ.

ಇನ್ನು ಎಡಮಂಗಲದ ರೈಲು ನಿಲ್ದಾಣದ ಬಳಿ ಇರುವ ಕೆಲವು ಕಂಡಮ್ ಕ್ವಾರ್ಟರ್ಸ್ ಗಳಲ್ಲಿ ಕಾಂಡೋಮ್ ಸಿಕ್ಕಿದ ಬಗ್ಗೆ ಗುಸುಗುಸು ಇದೆ. ರೈಲು ಸ್ಟೇಷನ್ ಬಳಿ ಇರುವ ಉಪಯೋಗ ಇಲ್ಲದ, ಪಾಳು ಬಿದ್ದ ಕೆಲವು ರೈಲ್ವೇ ಕ್ವಾರ್ಟರ್ಸ್ ನಲ್ಲಿ ಡೇ/ನೈಟ್ ಅನೈತಿಕ ಚಟುವಟಿಕೆಗಳು ನಡೆಯುವ ಬಗ್ಗೆ ಗುಮಾನಿಗಳಿವೆ. ರೈಲು ಇಲಾಖೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ಕ್ವಾರ್ಟರ್ಸ್ ನಲ್ಲಿ ಬಂದು ಮತ್ತೇ ಬ್ರಹ್ಮ ರಕ್ಕಸ ಕುಟ್ಟಿ ಪೂಜೆ ನಡೆಸಿ ಗೃಹಪ್ರವೇಶ ಮಾಡಿದರೆ ಇಡೀ ಎಡಮಂಗಲಕ್ಕೇ ಬಾಧೆ.
