
ಮಂಜೇಶ್ವರ – ಸುಬ್ರಹ್ಮಣ್ಯ ಸ್ಟೇಟ್ ಹೈವೇಗೆ ಬೆದ್ರಾಳ ಎಂಬಲ್ಲಿ ಎರಡೆರಡು ಸಲ ಹಾಕಿದ್ದ ಇಂಟರ್ ಲಾಕ್ ಈಗ ಮತ್ತೇ ಏಳಲು ಶುರುವಾಗಿದೆ. ಇನ್ನು ಎರಡು ಮಳೆ ಮತ್ತು ಕಾಣಿಯೂರು ಲೈನಿನ ಎರಡು ಗುಜಿರಿ ತೊಂಡ ಬಸ್ಸುಗಳು ದಡಬಡ ದಡಬಡ ಅಂತ ಹೋದರೆ ಸಾಕು. ರಸ್ತೆ ಸೈಯ್ಯಲಿದೆ. ಅಲ್ಲೇ ಒಂದು ದೇವದಾರು ಮರ ಸಹ.

ಹಾಗೆಂದು ಮಂಜೇಶ್ವರ – ಸುಬ್ರಹ್ಮಣ್ಯ ಸ್ಟೇಟ್ ಹೈವೇ ಇಂಟರ್ ಸ್ಟೇಟ್ ಹೈವೇ ಆಗಿ ಕನ್ವರ್ಟ್ ಆದ ಮೇಲೆ ಚಂದ ಚಂದ ಆಗಿತ್ತು. ವಾಹನಗಳು ರೊಯ್ಯೆಂದು ಕಾಣಿಯೂರಿಗೆ, ನಿಂತಿಕಲ್ಲಿಗೆ, ಸುಬ್ರಹ್ಮಣ್ಯಕ್ಕೆ ಹಾರಲು ಶುರು ಮಾಡಿತ್ತು. ಅದರಲ್ಲೂ ಮಧ್ಯಾಹ್ನದ ಬೆಂಗಳೂರು ಬಸ್ಸಂತೂ ಅರ್ಧ ಮುಕ್ಕಾಲು ಗಂಟೆಗಳಲ್ಲಿ ಐವತ್ತು ಕಿಲೋಮೀಟರ್ ಗಳನ್ನು ತೆಗೆದ್ದು ನುಂಗಿ ಬಿಡುತ್ತಿತ್ತು. ಆದರೆ ಅಲ್ಲಿ ಬೆದ್ರಾಳ ಮರದ ಮಿಲ್ಲಿನ ಎದುರು ಅದ್ಯಾಕೋ ಇಂಟರ್ ಸ್ಟೇಟ್ ಹೈವೇಗೆ ಶುಗರ್ ಶುರುವಾಗಿ ಹೋಯ್ತು. ಶುರುವಾದ ಗಾಯ ಉಲ್ಬಣವಾಗುತ್ತಾ ಹೋಯ್ತು .ಹೈವೇ ಬದಿಯಲ್ಲಿ ಇದ್ದ ಜವ್ವನೇ ದೇವದಾರು ಮರ ಮತ್ತು ಅಂಡಿಗುಂಡಿ ಒರತ್ತೆ ಹೈವೇಗೆ ಹೈ ಶುಗರ್ ತಂದು ಬಿಟ್ಟಿತು. ಓ…. ಎಂದು ಹೈವೇ ಸಂಬಂಧಿಕರು, ಕುಟುಂಬಸ್ಥರು ಎದ್ದು ಕುಳಿತರು. ದೇವದಾರುಗೆ ಮೋಕ್ಷ ಕೊಟ್ಟು ಇಂಟರ್ ಲಾಕ್ ನವನನ್ನು ಸೆಟ್ ಮಾಡಿ ಬಿಟ್ಟರು. ಹೈವೇಯ ಡಾಂಬರು ಎಬ್ಬಿಸಿ ಬದಿಗೆ ಹಾಕಿ ಇಂಟರ್ ಲಾಕ್ ಹಾಕಿ ಚೆಂದ ಮಾಡಿಬಿಟ್ಟರು. ಬಿಲ್ ಆಯಿತು. ಎರಡೇ ದಿನ, ನಲವತ್ತೆಂಟು ಗಂಟೆ ಭರ್ತಿ ಆಗಿರಲಿಲ್ಲ, ಪರಬ್ಬನ ಕೂಲಿ ಬಿದ್ದ ಹಾಗೆ ಇಂಟರ್ ಲಾಕ್ ಎದ್ದು ಕುಂತಿತು. ಜನ ಬೊಗ್ಗಿ ನಾಯಿಗೆ ಬೈಯ್ದ ಹಾಗೆ ಬೈಯ್ದರು. ಓ… ಎಂದು ಹೈವೇ ಸಂಬಂಧಿಕರು, ಕುಟುಂಬಸ್ಥರು ಪಿರ ಓಡೋಡಿ ಬಂದರು. ಹಾಕಿದ ಇಂಟರ್ ಲಾಕ್ ಸರಿ ಇಜ್ಜಿ, ಸೆಟ್ಟಿಂಗ್ ಸರಿ ಆತಿಜಿ ಎಂದು ಹಾಕಿದ ಅಷ್ಟೂ ಇಂಟರ್ ಲಾಕ್ ಎಬ್ಬಿಸಿ ಟ್ರ್ಯಾಕ್ಟರ್ ಗೆ ತುಂಬಿಸಿ ಮತ್ತೇ ಹೊಸ ಇಂಟರ್ ಲಾಕ್ ಹಾಕಿ, ಸಿಮೆಂಟ್ ಸಾರ್ಣೆ ಮಾಡಿ ಓಡಿ ಹೋಗಿ ಬಿಲ್ ತಗೊಂಡು ಕೈಕಾಲು ತೊಳೆದುಕೊಂಡರು. ಒಂದು ವರ್ಷ ಆಯುಷ್ಯ. ಬೆದ್ರಾಳದ ಮರದ ಮಿಲ್ಲಿನ ಹತ್ತಿರ ಮತ್ತೇ ಬ್ರೇಕ್,ಕ್ಲಚ್, ಸ್ಟಾಪ್, ಫಸ್ಟ್ ಗೇರ್ ಶುರುವಾಗುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ. ಹಾಕಿದ ಇಂಟರ್ ಲಾಕ್ ಅಲುಗಾಡಲು ಶುರುವಾಗಿದೆ. ಕೆಲವು ಪೀಸ್ ಎದ್ದೂ ಬಿಟ್ಟಿದೆ. ಇನ್ನು ಏನಿದ್ದರೂ ಸರೀ ಮಳೆ ಬಂದರೆ ಒಂದು ವಾರ ಜೀವದಲ್ಲಿ ಇರಬಹುದು. ಮತ್ತೇ ಅದೇ ಫಸ್ಟ್ ಗೇರ್ ಹಾಕಲೇ ಬೇಕು.

ಹಾಗೆಂದು ಇಲ್ಲಿಗೆ ಇಂಟರ್ ಲಾಕ್ ಹಾಕಲು ಅದ್ಯಾವ ಇಂಜಿನಿಯರ್ ಹೇಳಿದನೋ, ಯಾವ ಕ್ಯಾಲ್ಕುಲೇಸನ್ ಮೇಲೆ ಹೈವೇಗೆ ಇಂಟರ್ ಲಾಕ್ ಹಾಕಿದರೋ ಆ ದೇವರಿಗೇ ಗೊತ್ತು. ಅಲ್ಲಿ ರೋಡ್ ಅಷ್ಟು ಆಗಲ ಇದ್ದರೂ, ಒರತ್ತೆಯಿಂದ ಡಾಂಬರು ನಿಲ್ಲುವುದಿಲ್ಲ ಎಂದು ಗೊತ್ತಿದ್ದರೂ, ಕಾಂಕ್ರಿಟೀಕರಣವೇ ಒಳ್ಳೇ ಪರಿಣಾಮಕಾರಿ ಮದ್ದು ಎಂದು ಗೊತ್ತಿದ್ದರೂ ಕೇವಲ ಇಂಟರ್ ಲಾಕ್ ನವನನ್ನು ಉದ್ಧಾರ ಮಾಡಲು ಈ ಹೈವೇಗೆ ಇಂಟರ್ ಲಾಕ್ ಅಳವಡಿಸಲಾಯಿತು. ಆಯ್ತು ಇಂಟರ್ ಲಾಕ್ ಹಾಕಿದರೂ ಅದನ್ನು ಸರಿಯಾಗಿ ಸೆಟ್ ಮಾಡಿ ಹಾಕಿರಲಿಲ್ಲ, ಒರತ್ತೆಗೆ ಒಂದು ಶಾಶ್ವತ ಪರಿಹಾರ ಮಾಡಲಿಲ್ಲ. ಒರತ್ತೆ ಹಾಗೇ ಉಳಿಯಿತು, ಚರಂಡಿಯೂ ಹಾಗೆ ರೋಡ್ ಸೈಡಲ್ಲಿ ಮಲಗಿಕೊಂಡಿತು ಮತ್ತು ರೋಡ್ ಸೈಡಲ್ಲಿ ಇದ್ದ ಒಂದು ರಕ್ಕಸನ ಕಿನ್ನಿ ದೇವದಾರು ಮರ ತೆಗೆಯಲೇ ಇಲ್ಲ. ಅಂತ ಪ್ರಾಬ್ಲಂ ಇರುವಾಗಲೇ ಅದರ ಮೇಲೆ ಪೊಟ್ಟು ಇಂಟರ್ ಲಾಕ್ ಹಾಕಿ ಹೋಗಿ ಬನ್ನಿ ಮಾಡಲಾಯಿತು. ಈಗ ಮತ್ತೇ ಹೊಸ ಬಿಲ್ಲಿಗೆ ಹೈವೇ ರೆಡಿಯಾಗಿದೆ. ಪೊಟ್ಟು ಇಂಟರ್ ಲಾಕ್ ಕೂಡ ರೆಡಿಯಾಗಿರಬಹುದು.

