
ದಕ್ಷಿಣ ಕನ್ನಡ ಹಾಗೂ ಉಡುಪಿ ಭಾಗದ ಕೃಷಿ ಕ್ಷೇತ್ರದಲ್ಲಿ ಕಳೆದ ವರ್ಷಗಳಿಂದ ಎಡ್ಡೆಮುಂಚಿ ಸದ್ದು ಮಾಡುತ್ತಿದ್ದು, ಎಡ್ಡೆಮುಂಚಿ ಹೆಸರಿನಲ್ಲಿ ಕೋಟಿ ಲೆಕ್ಕದಲ್ಲಿ ಕೃಷಿಕರಿಗೆ ನಾಮ ಹಾಕಿದ ಸುದ್ದಿ ಸದ್ದು ಮಾಡುತ್ತಿದೆ. ಅದರಲ್ಲೂ ಕೃಷಿಕ ಭಟ್ರುಗಳಿಗೆ ಕಲರ್ ಕಲರ್ ಟೋಪಿ ಇಡಲಾಗಿದೆ.
ಹಾಗೆಂದು ಹಿಂದೆ ಒಮ್ಮೆ ದಕ್ಷಿಣ ಕನ್ನಡ, ಉಡುಪಿ ಕೃಷಿಕರಿಗೆ ವೆನಿಲ್ಲಾ ಹುಚ್ಚು ಹಿಡಿದಿತ್ತು. ಕಂಡ ಕಂಡ ತೋಟದಲ್ಲಿ ವೆನಿಲ್ಲಾ ಹಗ್ಗ ಬಿಡಲಾಗಿತ್ತು. ವೆನಿಲ್ಲಾ ಬೆಳೆದ ಕೃಷಿಕರು ಇನ್ನು ಅಂಬಾನಿ ಲೆವೆಲ್ ರೀಚ್ ಆಗುತ್ತಾರೆ ಎಂದೇ ಇತ್ತು. ಅದಕ್ಕೆಂದೇ ನೈಂಟಿ ಪರ್ಸೆಂಟ್ ಕೃಷಿಕರು ವೆನಿಲ್ಲಾ ಹಗ್ಗ ತಗೊಂಡಿದ್ದರು. ಕೃಷಿಕರ ಈ ಹುಚ್ಚನ್ನು ಸದುಪಯೋಗ ಪಡಿಸಿಕೊಂಡ ಕೆಲವು ಕಾಕಮಾರ್ ಕೂಡ ವೆನಿಲ್ಲಾ ವೈವಾಟಿಗೆ ಇಳಿದು ಹಗ್ಗ ಮಾರಿ ಕಿಸೆ ಭರ್ತಿ ಮಾಡಿಕೊಂಡಿದ್ದರು. ಒಂದು ಫೈನ್ ಮಾರ್ನಿಂಗ್ ವೆನಿಲ್ಲಾ ಮಾರ್ಕೆಟ್ ಡಢಲ್ಲೆಂದು ಬಿದ್ದು ಹೋಯ್ತು. ವೆನಿಲ್ಲಾ ಏನಿಲ್ಲ ಆಗಿ ಹೋಯ್ತು. ಆಮೇಲೆ ಮಾರ್ಕೆಟಿಗೆ ಬಂದದ್ದೇ ಇನ್ನೊಂದು ಹಗ್ಗ. ಎಡ್ಡೆಮುಂಚಿ ಬಲ್ಲ್. ಹುಚ್ಚು ಜೋರಿದೆ.

ಅವನು ವಿಟ್ಲ ಭಾಗದ ಸಸಿಯಣ್ಣ. ದನಗಳ್ಳರ ಮಾಜೀ ಫ್ರೆಂಡ್. ತನ್ನ ಪೂರ್ವಾಶ್ರಮದಲ್ಲಿ ದನಗಳ್ಳರೊಂದಿಗೆ ದನ ಸಾಗಿಸಿ ದಿನ ದೂಡುತ್ತಿದ್ದಾಗ ಒಮ್ಮೆ ಪೋಲಿಸರ ಕೈಗೆ ಸಿಕ್ಕಿ ಬಿದ್ದು ಕಸ್ಟಡಿಯಲ್ಲಿ ಜ್ಞಾನೋದಯ ಹೊಂದಿ ಮುಂದೆ ಎಡ್ಡೆಮುಂಚಿ ಅವತಾರದಲ್ಲಿ ಸಮಾಜದ ಮುಂದೆ ಪ್ರತ್ಯಕ್ಷನಾದವನು. ಹಾಗೆ ದಕ್ಷಿಣ ಕನ್ನಡದ ಕೃಷಿಕರಿಗೆ ಎಡ್ಡೆಮುಂಚಿ ಹುಚ್ಚು ಜೋರಿದೆ ಎಂದು ಮನಗಂಡು ಎಡ್ಡೆಮುಂಚಿ ಹಗ್ಗ ಜಗ್ಗಾಟಕ್ಕೆ ಇಳಿದು ಇದೀಗ ಕೃಷಿಕರಿಗೆ ಹಗ್ಗದ ನಾಮ ಹಾಕಿ ಕೆಲವು ಕಡೆಗಳಲ್ಲಿ ಸ್ವಯಂ ಕರ್ಫ್ಯೂ ಹೇರಿಸಿಕೊಂಡವನು. ಆಚೆ ಹೋದರೆ ಎಡ್ಡೆಮುಂಚಿ ಹಗ್ಗದಲ್ಲೇ ನೇತಾಡಿಸುತ್ತಾರೆ.

ಹಾಗೆ ದನಗಳ್ಳರ ಜೊತೆ ಜೈಲಿಂದ ಹೊರಬಂದ ಸಸಿ ಎಡ್ಡೆಮುಂಚಿ ವೈವಾಟಿಗೆ ಇಳಿದು ಬಿಟ್ಟ. ಆಚೆ ಘಟ್ಟ ಹತ್ತಿ ಸಕಲೇಶಪುರ ಕಡೆಯಿಂದ ಹತ್ತು ರೂಪಾಯಿ ಕೊಟ್ಟು ಗಿಡ ತಂದು ಇಲ್ಲಿ ಮೂವತ್ತಕ್ಕೆ ಇಳಿಸ ತೊಡಗಿದ. ಅದರಲ್ಲೂ ವಿಶೇಷವಾಗಿ ಕೃಷಿಕ ಭಟ್ರುಗಳಿಗೆ ಈತ ದೊಡ್ಡ ದೊಡ್ಡ ಮಟ್ಟದಲ್ಲಿ ನಾಮ ಹಾಕಿ ಬಿಟ್ಟ. “ಇಂದು ಗಾಡಿ ಲೈನಿಗೆ ಬತ್ತು. ಒಳ್ಳೇ ಸೆಸಿ ಇದ್ದು, ನಿಂಗೊಗೆ ಹಾಯೆಕ್ಕಾ” ಎಂದೇ ಫೋನ್ ಮಾಡುವ ಈತ ಸಕಲೇಶಪುರದ ಪೊಟ್ಟು ಗಿಡಗಳನ್ನೇ ತಂದು ಅನ್ ಲೋಡ್ ಮಾಡಿ ಮೂವತ್ತರಿಂದ ನಲವತ್ತರ ತನಕ ಎಳೆದು ಕೊಳ್ಳುತ್ತಾನೆ ಎಂಬ ದೂರಿದೆ. ಹಾಗೆಂದು ಆ ಗಿಡಗಳಲ್ಲಿ ಏನೂ ಇರುವುದಿಲ್ಲ. ಒಂದು ತುಂಡು ಎಡ್ಡೆಮುಂಚಿ ಹಗ್ಗವನ್ನು ಕಟ್ಟ್ ಮಾಡಿ ತೊಟ್ಟೆಯೊಳಗೆ ಸ್ವಲ್ಪ ಮಣ್ಣು ತುಂಬಿಸಿ ಅದರಲ್ಲಿ ಕುತ್ತಿ ಕೊಡುವುದು ಅಷ್ಟೇ. ಅದರಲ್ಲಿ ಸ್ವಲ್ಪ ಚಿಗುರು ಬಂದಿರುತ್ತದೆ ಅಷ್ಟೇ. ಆದರೆ ಬೇರು ಬಂದಿರುವುದಿಲ್ಲ. ಕೃಷಿಕರು ಅದನ್ನು ಕೊಂಡೋಗಿ ಕಂಗಿನ ಬುಡದಲ್ಲಿ ನೆಟ್ರೆ ಎರಡೇ ದಿನದಲ್ಲಿ ಎಡ್ಡೆಮುಂಚಿಗೆ ಮೂರ್ಚೆ ತಪ್ಪುತ್ತದೆ. ನಾಲಕ್ಕು ದಿನದಲ್ಲಿ ಐಸಿಯೂಗೆ ಹೋಗುತ್ತದೆ ಮತ್ತು ಆರನೇ ದಿನ ವೆಂಟಿಲೇಟರ್, ಏಳೇಂಟು ದಿನಗಳಲ್ಲಿ ಪಡ್ಚ.ಆಯುಷ ಗಟ್ಟಿ ಇದ್ದ ಗಜಕೇಸರಿ ಯೋಗದ ಕೆಲವೇ ಕೆಲವು ಎಡ್ಡೆಮುಂಚಿ ಗಿಡಗಳು ಬದುಕಿದ್ದು ಬಿಟ್ಟರೆ ಬಾಕಿದ್ದೆಲ್ಲ ಢಮಾರ್. ಸಸಿ ಕೈಯಿಂದ ನೀವು ನೂರು ಸಸಿ ಇಳಿಸಿಕೊಂಡರೆ ಅದರಲ್ಲಿ ಎಪ್ಪತ್ತು ಪರ್ಸೆಂಟ್ ಪರಮಾತ್ಮನ ಪಾದಕ್ಕೂ, ಹತ್ತು ಪರ್ಸೆಂಟ್ ವೆಂಟಿಲೇಟರ್ ಗೂ, ಹತ್ತು ಪರ್ಸೆಂಟ್ ಐಸಿಯೂಗೂ ಹೋಗುವುದು ವಾಡಿಕೆ. ಉಳಿದ ಟೆನ್ ಮಾತ್ರ ಕಂಗಿಗೆ ಹತ್ತುವುದು. ಹಾಗೆ ಮಾಡಿದ ಕಾರಣ “ಒಳ್ಳೇ ಸೆಸಿ ಇದ್ದು” ಎಂದು ಒಮ್ಮೆ ಇಳಿಸಿ ಹೋದ ಮೇಲೆ ಸಸಿ ಆ ಕಡೆ ಲಾರಿ ತಿರುಗಿಸಿದ ಉದಾಹರಣೆಗಳೇ ಇಲ್ಲ.

ಹಾಗೆ ಸಸಿ ಕೈಯಿಂದ ನೀವು ಒಂದು ಸಾವಿರ ಎಡ್ಡೆಮುಂಚಿ ಸಸಿಗಳನ್ನು ರೂಪಾಯಿ ಮೂವತ್ತರ ಹಾಗೆ ಕೊಟ್ಟು ಪರ್ಚೇಸ್ ಮಾಡಿದರೆ ಅದರಲ್ಲಿ ಬದುಕೋದು ಕೇವಲ ಕಾಲು ಪರ್ಸೆಂಟ್ ಮಾತ್ರ. ಅಂದಾಜು ಏಳ್ನೂರು ಗಿಡಗಳು ಢಮಾರ್. ಈ ಬಗ್ಗೆ ಸಸಿಗೆ ಫೋನ್ ಮಾಡಿದ್ರೆ ” ನೀವು ಈಗ ಯಾಕೆ ಗಿಡ ನೆಟ್ಟಿದ್ದು, ನೆಟ್ಟಿದ್ದು ಸರಿ ಆಗಿಲ್ಲ, ವಾಸ್ತು ತಪ್ಪಿದೆ, ನೆಟ್ಟ ನಕ್ಷತ್ರ ಚೆನ್ನಾಗಿಲ್ಲ” ಎಂದೆಲ್ಲಾ ಕೃಷಿಕರಿಗೇ ಜಬರ್ದಸ್ತ್ ಮಾಡುತ್ತಾನಂತೆ. ಇನ್ನು ಗಿಡ ನೆಡದೆ ಅದು ತೊಟ್ಟೆಯಲ್ಲೇ ಪಡ್ಚ ಆದರೆ “ನೀವು ಯಾಕೆ ಗಿಡ ನೆಟ್ಟಿಲ್ಲ, ನೀವು ಗಿಡ ನೆಡದಕ್ಕೆ ನಾವು ಜವಾಬ್ದಾರರಲ್ಲ” ಎಂದೂ ಪ್ಲೇಟ್ ತಿರುಗಿಸಿ ಹಾಕಿ ಬಯ್ಯುತ್ತಾನಂತೆ. ಇನ್ನು ” ಗಾಡಿ ಲೈನಿಗೆ ಬತ್ತು” ದಿನ ಕೃಷಿಕರ ಬೇಡಿಕೆಗೆ ಅನುಸಾರವಾಗಿ ಗಿಡಗಳ ಬೋರ್ಡ್ ಬದಲಾಯಿಸಲಾಗುತ್ತದೆ. ಕೃಷಿಕರಿಗೆ ಪಣಿಯೂರು ಎಡ್ಡೆ ಮುಂಚಿ ಸಸಿ ಜಾಸ್ತಿ ಬೇಕಿದ್ದರೆ ಸಿಗಂದೂರು ಎಡ್ಡೆ ಮುಂಚಿ ಸಸಿಯ ಬೋರ್ಡ್ ತೆಗೆದು ಒಳಗೆ ಇಟ್ಟು ಅದಕ್ಕೂ ಪಣಿಯೂರು ಬೋರ್ಡ್ ಇಡೋದು, ಸಿಗಂದೂರಿಗೆ ಜಾಸ್ತಿ ಬೇಡಿಕೆ ಇದ್ದರೆ ಪಣಿಯೂರಿಗೂ ಸಿಗಂದೂರು ಬೋರ್ಡ್ ಇಡೋದು, ಕುಂಬಕೋಡಿಗೆ ಪಣಿಯೂರು ಬೋರ್ಡ್, ಸಿಗಂದೂರಿಗೆ ಮತ್ತೊಂದು ಬೋರ್ಡ್ ಹೀಗೆ ಲೋಡ್ ಖಾಲಿಯಾಗುವ ತನಕ ಬೋರ್ಡ್ ಗಳನ್ನು ಬದಲಾಯಿಸುತ್ತಾ ಹೋಗುತ್ತಿದ್ದ ಎಂದು ತಿಳಿದುಬಂದಿದೆ. ಹಾಗೆಂದು ಈತ ತನ್ನ ಪೊಟ್ಟು ಎಡ್ಡೆ ಮುಂಚಿ ಸಸಿಗಳನ್ನು ಹೇಗೆ ಮಾರ್ಕೆಟಿಂಗ್ ಮಾಡುತ್ತಿದ್ದ ಅಂದರೆ ಜಾಲತಾಣಗಳಲ್ಲಿ ಕೃಷಿಕರದ್ದೇ ಗ್ರೂಪ್ ಮಾಡಿಕೊಂಡು ಅದರಲ್ಲಿ ಪ್ರಗತಿಪರ ಕೃಷಿಕರ ತೋಟಗಳ ವಿಡಿಯೋ ಬಿಟ್ಟು”ಇದು ನಾವು ಕೊಟ್ಟ ಗಿಡಗಳು” ಎಂದು ರೈಲು ಬಿಟ್ಟು ಬಿಟ್ಟೇ ಮಂಗ ಮಾಡುತ್ತಿದ್ದ.
“ನಿಮ್ಗೆ ಎಡ್ಡೆ ಮುಂಚಿ ಹಗ್ಗ ಹಬ್ಬಿಸಲು ದೂಪದ ಸಸಿ ಬೇಕೇ, ಬಚ್ಚಿರೆ ಬಲ್ಲ್ ಬಿಡಲು ಕೊರೆಜ್ಜಿ ಸಸಿ ಬೇಕೇ, ಬಸಳೆ ದೊಂಪಕ್ಕೆ ಸರೋಳಿ ಸಸಿ ಬೇಕೇ, ಮಣೋಳಿ ಹಗ್ಗ ಬಿಡಲು ಕುರ್ಬಿಂಲಿನ ಅಡರ್ ಬೇಕಾ” ಎಂದೆಲ್ಲಾ ಈಗ ಸಸಿಯಣ್ಣ ತನ್ನ ಮಾರ್ಕೆಟ್ ವ್ಯಾಪ್ತಿ ಜಾಸ್ತಿ ಮಾಡಿಕೊಂಡಿದ್ದಾನೆ. ಅದರಲ್ಲೂ ಅಪಾಯಕಾರಿ ಬೆಳವಣಿಗೆ ಅಂದರೆ ಸಸಿಯಣ್ಣ ಸೇಬಿನ ಸಸಿಗಳ ವೈವಾಟಿಗೆ ಇಳಿದಿದ್ದು. ಸಸಿಯಣ್ಣನ ಎಡ್ಡೆಮುಂಚಿ ಲಾರಿಯಲ್ಲಿ ಸೇಬಿನ ಸಸಿಗಳು ಬರುತ್ತಿರುವುದು ವಿಪರ್ಯಾಸವೇ ಸರಿ. ಇದೀಗ ಕೃಷಿಕರಿಗೆ ಮಂಗ ಮಾಡಿ ಸೇಬಿನ ಸಸಿಗಳ ಮಾರಾಟ ಮಾಡುತ್ತಿರುವ ಇದೇ ಸಸಿ ಮುಂದೆ ಖರ್ಜೂರ, ದ್ರಾಕ್ಷಿ ಸಸಿ ಮಾರದಿದ್ರೆ ಅಷ್ಟೇ ಸಾಕು ಎಂಬುದು ದೇವರಲ್ಲಿ ಬೇಡಿಕೆ. ಕಳೆದ ಕೃಷಿ ವರ್ಷದಲ್ಲಿ ಇದೇ ಸಸಿ ಕೇವಲ ಹನ್ನೊಂದು ಲಕ್ಷ ಎಡ್ಡೆಮುಂಚಿ ಸಸಿಗಳನ್ನೇ ಮಾರಾಟ ಮಾಡಿದ್ದು ಸಾರ್ವಕಾಲಿಕ ದಾಖಲೆ. ಈಗ ಲೆಕ್ಕ ಹಾಕಿ. ಒಂದು ಸಸಿಗೆ ಮೂವತ್ರೂಪಾಯಿ ಆದರೆ ಹನ್ನೊಂದು ಲಕ್ಷಕ್ಕೆ ಎಷ್ಟು. ಈ ಹನ್ನೊಂದು ಲಕ್ಷ ಗಿಡಗಳಲ್ಲಿ ಬದುಕಿದ್ದು ಎಷ್ಟು, ಪರಮಾತ್ಮನ ಪಾದ ಸೇರಿದ್ದು ಎಷ್ಟು. ಎಲ್ಲಾ ಲೆಕ್ಕ ಹಾಕಿದರೆ ಸಸಿ ಪದ್ರಾಡ್ ಗ್ಯಾರಂಟಿ.