
ಪುತ್ತೂರು ಪೇಟೆಯ ಒಂಜಿ ಕೋಡಿಯಲ್ಲಿರುವ ಪುತ್ತೂರು ಉಪ ವಿಭಾಗದ ಪೋಲಿಸ್ ಉಪ ವರಿಷ್ಠನ ಕಛೇರಿ ಕೈತಲ್ ಮತ್ತು ಬನ್ನೂರು ಗ್ರಾಮದ ಸೇಡಿಯಾಪಿನಲ್ಲಿ ಮೆಡಿಕಲ್ ಕಾಲೇಜು ಮಾಡಲೆಂದು ಮರ ಕಡಿಯುತ್ತಿದ್ದ ಮತ್ತು ಕದಿಯುತ್ತಿದ್ದ ಮರಗಳ್ಳರ ಮೇಲೆ ಪುತ್ತೂರು ರೇಂಜೆರ್ ಟೈಟ್ ಕೇಸ್ ಜಡಿದು ಮರ ಸೀಜ್ ಮಾಡಿದ ಬಗ್ಗೆ ತಿಳಿದು ಬಂದಿದೆ. ಮರಗಳ್ಳತನದ ಹಿಂದೆ ಪುತ್ತೂರಿನ ಇಬ್ಬರು ಪಾರ್ಟ್ ಟೈಮ್ ಕಾಂಗ್ರೇಸಿಗರ ಸ್ಲೀಪಿಂಗ್ ಪಾರ್ಟ್ನರ್ ಶಿಪ್ ಇದೆ ಎಂದು ಕೂಡ ತಿಳಿದುಬಂದಿದೆ.

ಅಲ್ಲಿ ಪುತ್ತೂರು ಪೇಂಟೆಯ ಒಂದು ಸೈಡಲ್ಲಿ ನರಮಾನಿ ಹೋಗದ ಒಂದು ಬರೆಯಲ್ಲಿರುವ ಪುತ್ತೂರು ಪೋಲಿಸ್ ಉಪ ವರಿಷ್ಠನ ಆಫೀಸಿನ ಸುತ್ತ ಮುತ್ತ ತುಂಬಾ ಅಕೇಶಿಯ ಮರಗಳು ಬೆಳೆದಿತ್ತು. ಎಷ್ಟು ಬೆಳೆದಿತ್ತು ಅಂದರೆ ಡಿವೈಎಸ್ಪಿ ಕಚೇರಿ ಕಾಣದಷ್ಟು ದಟ್ಟವಾಗಿತ್ತು. ಅದರಲ್ಲೂ ಕೆಲವು ಅಕೇಶಿಯ ಮರಗಳಂತೂ ಪುತ್ತೂರು – ಮಂಗಳೂರು ಎಕ್ಸ್ ಪ್ರೆಸ್ ಬಸ್ಸುಗಳ ಹಾರಾಟ ಚೀರಾಟಕ್ಕೇ ಡಿವೈಎಸ್ಪಿ ಕಛೇರಿ ಮೇಲೆಯೇ ಡಢಲ್ಲಾಗುವ ಪರಿಸ್ಥಿತಿ ಇತ್ತು. ಇದನ್ನು ಮನಗಂಡು ಕೆಲವು ಮರಕಂಡುಗಳು ಒಂದು ದೊಡ್ಡ ಲೆಕ್ಕಾಚಾರ ಹಾಕಿಬಿಟ್ಟರು. ಡಿವೈಎಸ್ಪಿ ಕಛೇರಿ ಮೇಲೆಯೇ ಮರ ಬೀಳುವ ಅಪಾಯಗಳಿವೆ,ಮರ ಬಿದ್ದರೆ ದೊಡ್ಡ ಅನಾಹುತ ಆಗಬಹುದು, ಅವು ಡೇಂಜರಸ್ ಮರಗಳು, ಕಿಲ್ಲರ್ ಮರಗಳು, ಕ್ರಿಮಿನಲ್ ಮರಗಳು, ಪಾಪ… ಡಿವೈಎಸ್ಪಿ ಎಂದು ಮಂಜಲ್ಪಡ್ಪಿನ ಒಬ್ಬ ಪಾರ್ಟ್ ಟೈಮ್ ಕಾಂಗ್ರೆಸ್ ಮರಿ ಪುಢಾರಿ ಸಂಬಂಧ ಪಟ್ಟವರ ತಲೆ ತಿಂದು ಮರ ಕಡಿಯಲು ಮತ್ತು ಕದಿಯಲು ಸ್ಕೆಚ್ ಹಾಕಿ ಬಿಟ್ಟ. ಈ ಬಗ್ಗೆ ಡಿವೈಎಸ್ಪಿ ಆಫೀಸಿಗೆ ಮರ ಬೂರುಂಡು ಎಂದು ಅರಣ್ಯ ಇಲಾಖೆಗೆ ಒಂದು ರೈಲರ್ಜಿ ಹಾಕ್ಕೊಂಡಿದ್ದು ಅವರು ಇವರ ರೈಲರ್ಜಿ ಪರಿಶೀಲಿಸಿ, ಸೀಲು ಗುದ್ದುವ ಮೊದಲೇ ಇತ್ಲಗೆ ಮಂಜಲ್ಪಡ್ಪು ಭಾಗದಲ್ಲಿ “ಪೂರ್ಣ”ವಾಗಿ ಮರ ಕಡಿಯುವ ಮತ್ತು ಕದಿಯುವ ಕೆಲಸ ಶುರುವಾಗಿತ್ತು. ಹಾಗೆ ಡಿವೈಎಸ್ಪಿ ಕಛೇರಿ ಸುತ್ತಮುತ್ತಲಿನ ಹೈಬ್ರೀಡ್ ಅಕೇಶಿಯ, ಮ್ಯಾಂಜಿಯಂ ಮತ್ತು ಗಾಳಿ ಮರಗಳನ್ನು “ಪೂರ್ಣ”ವಾಗಿ ಖಾಲಿ ಮಾಡಲು ಟಿಂಬರೇಶ್ವರರ ಟೀಂ ಎಲ್ಲಾ ಮರಗಳಿಗೂ ಗರ್ಗಸ್ ಇಡುತ್ತಾ ಹೋಯಿತು. ಹಾಗೆ ಡಿವೈಎಸ್ಪಿ ಕಛೇರಿ ಬಳಿ ಅಕೇಶಿಯ ಮರಗಳನ್ನು ಒತ್ತರೆ ಕಡಿಯಲಾಗುತ್ತಿದೆ ಮತ್ತು ಕದಿಯಲಾಗುತ್ತಿದೆ ಎಂಬ ಮಾಹಿತಿ ಅರಣ್ಯ ಇಲಾಖೆಗೆ ರಿಕ್ಷಾದಲ್ಲಿ ಬಂದಿದೆ. ಹಾಗೆ ಅರಣ್ಯ ಇಲಾಖೆ ಓಡಿ ಹೋಗಿ ಹೈಬ್ರೀಡ್ ಅಕೇಶಿಯಾದ ಐವತ್ತು ದಿಮ್ಮಿಗಳನ್ನು ವಶಪಡಿಸಿಕೊಂಡು ಟಿಂಬರೇಶ್ವರರ ಮೇಲೆ ಟೈಟ್ ಕೇಸ್ ಹಾಕಿತ್ತು. ಈ ಒಂದು ಪೂರ್ಣ ಮರ ಕಡಿದ ಕೇಸಿನ ಹಿಂದೆ ಪುತ್ತೂರಿನ ಒಬ್ಬ ಪಾರ್ಟ್ ಟೈಮ್ ಕಾಂಗ್ರೆಸ್ ಮರಿ ಪುಢಾರಿಯ ಕೈ ಇದ್ದು ಈತ ಈ ಹಿಂದೆ ತೆಂಗಿನ ಕಾಯಿ ಅಭಿಮಾನಿಯಾಗಿದ್ದು ಕಳೆದ ಎಲೆಕ್ಷನ್ ಟೈಮಲ್ಲಿ ಪೂರ್ಣವಾಗಿ ಬ್ಯಾಟ್ ಬೀಸಿದ್ದ ಬಗ್ಗೆ ಮಾಹಿತಿ ಇದೆ. ಹಾಗೆ ಎಲೆಕ್ಷನ್ ಟೈಮಲ್ಲಿ ಸನ್ಮಾನ್ಯರು ಪೂರ್ಣವಾಗಿ ಕೈ ಪ್ರಚಾರ ಕಾರ್ಯದಲ್ಲಿ ಇಲ್ಲದಿದ್ದು ತೆರೆಮರೆಯಲ್ಲಿ ಪೂರ್ಣವಾಗಿ ಬ್ಯಾಟ್ ಬೀಸಿದ್ದು ಹಲವು ನಿಷ್ಠಾವಂತ ಕಾಂಗ್ರೆಸಿಗರ ಕಣ್ಣು ಪೂರ್ಣ ಕೆಂಪಗಾಗಿಸಿದೆ. ಇದೀಗ ಕೈ ಹೆಸರಲ್ಲಿ ಪೂರ್ಣ ಮರ ಕಡಿದು ಈ ಮರಿ ಪುಢಾರಿ ನಿಷ್ಠಾವಂತರ ಪೂರ್ಣ ಅಸಹನೆಗೆ ಕಾರಣರಾಗಿದ್ದಾರೆ.

ಇನ್ನು ಅಲ್ಲಿ ಬನ್ನೂರು ಗ್ರಾಮದ ಸೇಡಿಯಾಪಿನಲ್ಲಿ ಡಾಕ್ಟ್ರ ಕಾಲೇಜು ಆಗುವುದಂತ ಸುದ್ದಿ. ಅದಕ್ಕೆ ಗ್ರೌಂಡ್ ಕ್ಲೀಯರೆನ್ಸ್ ಮಾಡಲು ಅಲ್ಲಿದ್ದ ಮರಗಳನ್ನು ಕಡಿಯಲು ಮತ್ತು ಕದಿಯಲು ಅನುವು ಮಾಡಿಕೊಡಲಾಗಿತ್ತು. ಇದರ ಹಿಂದೆಯೂ ಪುತ್ತೂರು ಕಾಂಗ್ರೇಸಿನ ಒಬ್ಬ ಪಾರ್ಟ್ ಟೈಮ್ ಮರಿ ಪುಢಾರಿ ಕೈ ಇರುವುದು ಸ್ಪಷ್ಟವಾಗಿ ಗೋಚರಿಸಿದೆ. ಆಚೆ ಆರ್ಯಾಪು ಗಿರಿಗಳಿಂದ ಇಳಿದು ಬಂದಿರುವ ಈ ಗಿರಿಗಿಟ್ ತನ್ನ ಪೂರ್ವಾಶ್ರಮದಲ್ಲಿ ಬಜರಂಗಿ ಆಗಿದ್ದು ಈಗ ಕೈ ಪಕ್ಷದಲ್ಲಿ ದೊಡ್ಡ ದೊಡ್ಡ ಲೀಡರ್ಸ್ ಜೊತೆ ನೇತಾಡಿ ನೇತಾಡಿ ಮೊನ್ನೆ ಸೇಡಿಯಾಪಿನಲ್ಲಿ ಮರ ಕಡಿಯಲು ಮತ್ತು ಕದಿಯಲು ಗ್ರೀನ್ ಸಿಗ್ನಲ್ ಮಾಡಿಸಿಕೊಂಡಿದ್ದ. ಹಾಗೆ ಈ ಕೇಸಲ್ಲಿ ಕೂಡ ಅರಣ್ಯ ಇಲಾಖೆಗೆ ರೈಲರ್ಜಿ ಕೊಟ್ಟಿದ್ದು ಅವರು ಸೀಲು ಗುದ್ದುವ ಮೊದಲೇ ಇತ್ಲಗೆ ಒತ್ತರೆ ಮಾಡಲಾಗಿತ್ತು ಮತ್ತು ನೆರೆಕರೆಗಳಲ್ಲಿ ಕೂಡ ಡಾಕ್ಟ್ರ ಕಾಲೇಜು ನೆಪದಲ್ಲಿ ಪ್ರೈವೇಟ್ ಜಾಗೆಗಳ ಮರಗಳಿಗೂ ಗರ್ಗಸ್ ಇಡಲಾಗಿತ್ತು. ಈ ಬಗ್ಗೆ ಕೂಡ ಪುತ್ತೂರು ಅರಣ್ಯ ಇಲಾಖೆ ಟೈಟ್ ಎಫ್ಐಆರ್ ಮಾಡಿದ್ದು ಟಿಂಬರೇಶ್ವರರ ಅಂಟ್ ಬಂದ್ ಮಾಡಲಾಗಿದೆ.


