
ಸುಬ್ರಹ್ಮಣ್ಯದಲ್ಲಿ ಕೆಲವು ಸೋಮಾರಿಗಳು ಮತ್ತು ಕೆಲಸಗಾರರ ಬಗ್ಗೆ ಮಾಹಿತಿಗಳು ವೈರಲ್ ಆಗುತ್ತಿದ್ದು ಸೋಮಾರಿಗಳು ಕೆಲಸಗಾರರಿಗಿಂತ ಜಾಸ್ತಿ ಸಂಬಳ ಜೇಬಿಗಿಳಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಇಲ್ಲಿ ಕೆಲಸ ಜಾಸ್ತಿ ಸಂಬಳ ಕಮ್ಮಿ, ಕೆಲಸ ಕಮ್ಮಿ ಸಂಬಳ ಜಾಸ್ತಿ.

ಹಾಗೆಂದು ಒಂದು ದೇವಸ್ಥಾನ ಅಂದ ಮೇಲೆ ಸಾವಿರಾರು ಕೆಲಸ. ದೇವರ ಕೆಲಸವೇ ಸಾವಿರ. ಅದರಲ್ಲೂ ಸ್ಟೇಟಿನ ನಂಬರ್ ವನ್ ದೇವರ ಆಲಯ ಅಂದರೆ ಮತ್ತೆ ಕೇಳಬೇಕಾ? ಸುಬ್ರಹ್ಮಣ್ಯದಲ್ಲೂ ಆಲಯದ ಹೊರಗೂ ಒಳಗೂ ಸಾವಿರ ಕೆಲಸಗಳಿವೆ. ಇಲ್ಲಿ ಇದೀಗ ಮಾಹಿತಿ ಬಂದಿರೋದು ದೇವಸ್ಥಾನದ ಹೊರಗಿನ ಕೆಲವು ವಿಭಾಗಗಳ ಬಗ್ಗೆ. ಅಲ್ಲಿ ದೇವರ ತೋಟದ ಕೆಲಸ, ಲಾಡ್ಜ್ ಕೆಲಸ, ಡೈನಿಂಗ್ ಹಾಲ್, ನೀರಾವರಿ ಕೆಲ್ಸ ಮತ್ತು ಯೂಜಿಡಿ ಕೆಲ್ಸಗಳಲ್ಲಿ ಕೆಲವು ಸೋಮಾರಿಗಳು ಧರ್ಮಕ್ಕೆ ಸಂಬಳ ಕ್ಯಾಶ್ ಮಾಡಿಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ. ನಿಜವಾಗಿಯೂ ನೋಡುವುದಾದರೆ ಈ ತೋಟದ ಕೆಲಸ ಭಾರೀ ಕಷ್ಟದ ಕೆಲಸ. ಆದರೆ ತೋಟದ ಕೆಲಸಗಾರರಿಗೆ ಇಲ್ಲಿ ದೊಡ್ಡ ಸಂಬಳ ಇಲ್ಲ. ಇನ್ನು ಲಾಡ್ಜ್ ವಿಭಾಗದ ಕೆಲಸಗಾರರಿಗೆ, ಡೈನಿಂಗ್ ಹಾಲ್ ಕೆಲಸಗಾರರಿಗೆ ಇಲ್ಲಿ ಮೂಂಕು ಮುಟ್ಟ ಕೆಲಸ ಇದೆ. ಕಾಲಿಗೆ ಟ್ಯೂಬ್ಲೆಸ್ ರೇಡಿಯಲ್ ಟೈರ್ ಸಿಕ್ಕಿಸಿಕೊಂಡೇ ಓಡಾಡುವ ಪರಿಸ್ಥಿತಿ ಇದೆ. ಆದರೆ ಇವರಿಗೆಲ್ಲ ತಿಂಗ್ಲ ಸಂಬ್ಳ ಕೇವಲ ಆರು ಮೂರ್ಲಿ ಹದಿನೆಂಟ ಅಷ್ಟೇ. ಆದರೆ ಅಲ್ಲಿ ದೇವಸ್ಥಾನದ ನೀರಾವರಿ ಸರಬರಾಜು ಮಾಡಲು ನಾಲ್ಕು ಜನ ಇದ್ದಾರೆ. ಅವರಿಗೆ ಎಂಥ ಕೂಡ ಕೆಲಸ ಇಲ್ಲ. ಪಂಪಿಗೆ ಸುಚ್ಚಿ ಹಾಕುವುದು ಬಿಟ್ಟರೆ ಬೇರೆಂಥ ಕೂಡ ಇಲ್ಲ. ಕೇವಲ ಪಂಪಿಗೆ ಸುಚ್ಚಿ ಹಾಕಲೇ ನಾಲ್ಕು ಜನ ಯಾಕೆ ಎಂಬ ಪ್ರಶ್ನೆ ಇದೆ. ಅದರಲ್ಲೂ ಈ ನಾಲ್ವರು ರಾಜಕೀಯ, ಅಂಗಡಿ ಗಿಂಗಡಿ, ರಿಕ್ಷಾ ಅಂತ ಮಾಡಿಕೊಂಡು ಪುರುಸೊತ್ತಲ್ಲಿ ಮಾತ್ರ ಬಂದು ಸುಚ್ಚಿ ಹಾಕುತ್ತಾರೆ. ಇವರದ್ದು ಏನಿದ್ದರೂ ಪಾರ್ಟ್ ಟೈಂ ನೀರಾವರಿ ಕೆಲ್ಸ. ಇಂಥವರು ತಿಂಗ್ಲ ಇಪ್ಪತ್ತೆರಡು ಸಾವ್ರ ಸಂಬಳ ಡ್ರಾ ಮಾಡಿಕೊಳ್ಳುತ್ತಾರಂತೆ. ಇನ್ನು ಆ ಯೂಜಿಡಿಯವರಿಗೂ ಪಂಪಿಗೆ ಸುಚ್ಚಿ ಹಾಕುವ ಕೆಲಸ ಮಾತ್ರ ಇದೆ ಎಂದು ಮಾಹಿತಿ ಇದೆ. ಸಂಬಳ ಮಾತ್ರ ಇಪ್ಪತ್ತೆರಡು.

ಇನ್ನು ಅಲ್ಲಿ ಡೈನಿಂಗ್ ಹಾಲ್ ಕಿತಾಪತಿ ಬರೆದರೆ ಒಂದು ಲೋಕದ್ದು ಇದೆ. ಇಲ್ಲಿ ಹಿಂದಿನಿಂದ ಬಂದು ಊಟ ಮಾಡುವವರ ಸಂಖ್ಯೆ ದಿನೇ ದಿನೇ ಜಾಸ್ತಿಯಾಗಿದೆ. ಅದ್ಯಾರೋ ಡೈನಿಂಗ್ ಹಾಲ್ ಜನ ಹಾಳೇ ತಟ್ಟೆಯಿಂದ ಹಿಡಿದು ಕಜಿಪ್ಪಿನ ತರ್ಕಾರಿ ತನಕ ಕಮೀಷನ್ ಹೊಡೆಯುತ್ತಾರೆ ಎಂದು ಸುದ್ದಿ. ಇನ್ನು ಕೆಲವು ಟ್ರಸ್ಟಿಗಳು ಸಹ ಬೆಳಿಗ್ಗೆ ಆಫೀಸಿಗೆ ಬಂದ ಹಾಗೆ ಬಂದು ಸಂಜೆಯೇ ಆಫೀಸ್ ಬಿಟ್ಟು ಹೋಗುವ ಸರ್ಕಾರಿ ಸಿಬ್ಬಂದಿ ಹಾಗೆ ವರ್ತಿಸುತ್ತಿರುವುದನ್ನು ನೋಡಿ ಜನ ಬಿದ್ದೂ ಬಿದ್ದು ನಗುತ್ತಿದ್ದಾರೆ. ಇನ್ನು ಟ್ರಸ್ಟಿಗಳು ಎದುರು ಬಂದಾಗಲೆಲ್ಲ ದೇವಸ್ಥಾನದ ನೌಕರರು ಎದ್ದು ನಿಂತು ಗೌರವ ಕೊಡಬೇಕು ಎಂಬ ಅಂಡಿಗುಂಡಿ ನಿಯಮ ಮತ್ತು ಟ್ರಸ್ಟಿಗಳು ದಿನಾ ಬಂದು ದೇವಸ್ಥಾನದ ಆಫೀಸಿನಲ್ಲಿ ಪಡರಿ ಬೀಳುವುದು, ಕೆಲಸ ತೆಗೆಸಿ ಕೊಡುತ್ತೇನೆ ಎಂದು ರೈಲು ಬಿಡುವುದು, ಬ್ರೋಕರ್ ಕೆಲಸ ಮಾಡೋದು ಇತ್ಯಾದಿ ಇತ್ಯಾದಿ. ಇದೆಲ್ಲ ಕತೆ ಬಹುಶಃ ಅಧ್ಯಕ್ಷರಿಗೆ ಗೊತ್ತಿಲ್ಲ ಅಂತ ಕಾಣ್ಸುತ್ತೆ.
