ದಕ್ಷಿಣ ಕನ್ನಡದ ಮೂಡಾಯಿ ಭಾಗದ ಕೊಲ್ಲಮೊಗ್ರ,ಕಲ್ಮಕಾರು,ಬಾಳುಗೋಡು ಮತ್ತು ಹರಿಹರ ಪಲ್ಲತ್ತಡ್ಕ ಕಡೆಗೆ ಸರಿ ಕಟ್ಟಾಗಿ ಒಂದು ಬಸ್ಸಿನ ವ್ಯವಸ್ಥೆ ಇಲ್ಲ ಎಂದು ವಿದ್ಯಾರ್ಥಿಗಳು ಬೊಬ್ಬೆ ಹೊಡೆಯುತ್ತಿದ್ದಾರೆ. ಅದು ಸುಳ್ಯದಿಂದಲೇ ಆಗಲಿ, ಸುಬ್ರಹ್ಮಣ್ಯದಿಂಲೇ ಆಗಲಿ ಈ ಭಾಗಕ್ಕೆ ಬಸ್ಸಿಲ್ಲ. ಇದ್ದ ಬಸ್ಸುಗಳಲ್ಲಿ ಯಾವಾಗಲೂ ಉಪ್ಪಡ್.
ಹಾಗೆಂದು ಕೊಲ್ಲಮೊಗ್ರ,ಕಲ್ಮಕಾರುಗಳು ದಕ್ಷಿಣ ಕನ್ನಡದ ಅಂಡಮಾನ್ ಗಳು. ನೂರಾರು ವಿದ್ಯಾರ್ಥಿಗಳು ಈ ಭಾಗಗಳಿಂದ ಶಾಲಾ ಕಾಲೇಜುಗಳಿಗೆ ಹೊರಗೆ ಬರಲೇ ಬೇಕು. ಕೆಲವರು ಸುಳ್ಯಕ್ಕೆ ಮತ್ತೆ ಕೆಲವರು ಸುಬ್ರಹ್ಮಣ್ಯ ಕಡೆಗೆ. ಅದರಲ್ಲೂ ಸುಬ್ರಹ್ಮಣ್ಯ ಈ ಊರುಗಳಿಗೆ ನಿಯರೆಸ್ಟ್ ಮತ್ತು ಡಿಯರೆಸ್ಟ್ ಆಗಿರುವುದರಿಂದ ಜೊಕುಲು ಮೆರವಣಿಗೆಯಲ್ಲಿ ಸುಬ್ರಹ್ಮಣ್ಯಕ್ಕೆ ಬಂದು ಬಿಡುತ್ತಾರೆ. ಇಲ್ಲಿ ಆಟೋ ವ್ಯವಸ್ಥೆ ಇಲ್ಲ, ಜೀಪು, ಕಾರು, ವ್ಯಾನ್ ಗಳ ಸರದಿ ಇಲ್ಲ, ಖಾಸಗೀ ಬಸ್ಸುಗಳ ಮ್ಯೂಸಿಕಲ್ ಹಾರ್ನ್ ಇಲ್ಲ. ಇಲ್ಲಿ ಸಾರಿಗೆ ಅಂತ ಇದ್ದರೆ ಅದು ನಿಂತರೆ ಸ್ಟಾರ್ಟ್ ಆಗದ ಮತ್ತು ಸ್ಟಾರ್ಟ್ ಆದರೆ ಆಫ್ ಆಗದ ಸರ್ಕಾರಿ ಬಸ್ಸುಗಳು. ಅದೂ ಬೆರಳೆಣಿಕೆಯಷ್ಟು. ಬೆಳಿಗ್ಗೆ ಒಂದು ಊದುಬತ್ತಿ ಟ್ರಿಪ್, ಮಧ್ಯಾಹ್ನ ಒಂದು ಸೂಂಟಾನ್ ಟ್ರಿಪ್ ಮತ್ತು ಸಂಜೆ ಒಂದು ಉಪ್ಪಡ್ ಟ್ರಿಪ್ ಇಷ್ಟೇ. ಇಲ್ಲಿ ಸುಬ್ರಹ್ಮಣ್ಯದಿಂದ ಕೊಲ್ಲಮೊಗ್ರ ಕಡೆಗೆ ಬೇರೆ, ಬಾಳುಗೋಡು ಕಡೆ ಬೇರೆ ಬಸ್ಸುಗಳಿವೆ. ಎಲ್ಲಿಯಾದರೂ ಒಂದು ಲೈನಿನ ಬಸ್ಸು ಹುಷಾರಿಲ್ಲದೆ ನಿಂತರೆ, ಅಥವಾ ದಾರಿಯಲ್ಲಿ ಬರುವಾಗ ಕಂಜಿ ಹಾಕಿದರೆ ಮುಗಿಯಿತು. ಆವತ್ತು ಬಸ್ಸಲ್ಲಿ ಜಾಮ್ ಟೈಟ್. ಕಟ್ಟಪ್ಪ ಕಂಡಕ್ಟರನಿಗೆ ಟಿಕೆಟ್ ಕೊಡಲೂ ಆಗಲ್ಲ.
ಹಾಗೆಂದು ಬಹಳ ಮೊದಲಿನಿಂದಲೂ ಈ ಭಾಗವನ್ನು ಯಾಕೆ ಕಡೆಗಣಿಸಲಾಗಿದೆ ಎಂದೇ ಗೊತ್ತಾಗುತ್ತಿಲ್ಲ. ಎರಡು ಬಸ್ಸಿನ ಜನ, ಜೋಕುಲು ಒಂದೇ ಬಸ್ಸಿನಲ್ಲಿ ಪ್ರಯಾಣಿಸ ಬೇಕಾದ ಅನಿವಾರ್ಯತೆ. ಒಮ್ಮೊಮ್ಮೆ ಕಂಜಿ ಹಾಕುವ ಬಸ್ಸು, ರಜೆ ಹಾಕುವ ಬಸ್ಸು, ವೀಲ್ ಬೇರಿಂಗ್ ಹೋಗಿರುವ ಬಸ್ಸು, ಸ್ನಾನ ಮಾಡದ ಕುರ್ತೆಲ ಬಸ್ಸು, ಸೂಂಟನ್ ಹೊಗೆಯ ಬಸ್ಸು, ಸೋರುವ ಬಸ್ಸು ಇತ್ಯಾದಿ ಇತ್ಯಾದಿ ಟೈಪಿನ ಬಸ್ಸುಗಳಿಂದ ಜನ,ಜೋಕುಲು ರೋಸಿ ಹೋಗಿದ್ದಾರೆ. ಒಂದು ಎಕ್ಸ್ ಟ್ರಾ ಬಸ್ಸು ಬಿಡಿ ಮಾರಾಯ್ರೆ ಎಂದು ಟಿ.ಸಿಗೆ ಹೇಳಿದರೆ ಬಸ್ಸಿಜ್ಜಿ ಅಣ್ಣಾ ಎಂಬ ಉತ್ತರ ಬರುತ್ತದೆ. ಕಾಡು ದಾರಿ, ಘಟ್ಟದ ಕೆಳಗೆ, ನರಮಾನಿ ಸಂಚಾರ ಇಲ್ಲದ ಪ್ರದೇಶಗಳು,ಇಲ್ಲಿ ಪೊಣ್ಣು ಜೋಕುಲು ಕಾಲೇಜಿಗಾಗಿ ಸುಬ್ರಹ್ಮಣ್ಯಕ್ಕೆ ಬರಬೇಕು. ಸಂಜೆ ಬಸ್ ಇಲ್ಲದಿದ್ದರೆ ಪರಿಸ್ಥಿತಿ ಗಂಭೀರವಾಗಿರುತ್ತದೆ. ಮನೆಗೆ ಕಾಲ್ ಮಾಡೋಣ ಅಂದ್ರೆ ರೇಂಜಿಲ್ಲ. ಬೇರೆ ಸರ್ವೀಸ್ ವಾಹನಗಳ ವ್ಯವಸ್ಥೆ ಇಲ್ಲ. ಕೆಎಸ್ಸಾರ್ಟಿಸಿಗೆ ಹೃದಯ ಅಂತ ಇದ್ದರೆ ಒಮ್ಮೆ ಮಿಡಿಯಲಿ.

