ಸುಳ್ಯ ಸಮೀಪದ ಜಾಲ್ಸೂರಿನ ಕೇರಳ – ಕರ್ನಾಟಕ ಗಡಿ ಪಂಜಿಕಲ್ಲು ಎಂಬಲ್ಲಿ ಕೇರಳ ರಾಜ್ಯದ ಸಿಂಗಲ್ ನಂಬರ್, ಡಬಲ್ ನಂಬರ್, ದೋ ನಂಬರ್ ಲಾಟ್ರಿಗಳನ್ನು ಮಾರಾಟ ಮಾಡಲಾಗುತ್ತಿದೆ ಎಂದು ಗಡಿ ಟವರ್ ವರದಿ ಮಾಡಿದೆ. ಸುಳ್ಯ ಪೋಲಿಸರ ಸರಹದ್ದು.
ಹಾಗೆಂದು ಕರ್ನಾಟಕದಲ್ಲಿ ಲಾಟ್ರಿ ನಿಷೇಧ. ಇಲ್ಲಿ ಲಾಟ್ರಿಯಿಂದಾಗಿ ಬೀದಿಗೆ ಬಿದ್ದವರು ನಿಷೇಧದ ಬಳಿಕ ಧೂಳು ಕೊಡವಿಕೊಂಡು ಎದ್ದು ನಿಂತಿದ್ದಾರೆ ಅಷ್ಟೇ. ಕೇರಳದ್ದು ಶುರು ಆಯಿತು. ಕೇರಳದ ಗಡಿ ಭಾಗಗಳಲ್ಲಿ, ಗಡಿ ಹತ್ತಿರದ ತಾಲೂಕ ಹೆಡ್ ಕ್ವಾರ್ಟರ್ಸ್ ಗಳಲ್ಲಿ, ಗಡಿ ಸನಿಹದ ಚಿಕ್ಕ ಚಿಕ್ಕ ಜಂಕ್ಷನ್ ಗಳಲ್ಲಿ ಕೇರಳ ಲಾಟ್ರಿ ಸದ್ದಿಲ್ಲದೆ ಸದ್ದು ಮಾಡುತ್ತಿದೆ, ಸುದ್ದಿ ಆಗುತ್ತಿದೆ. ಇದೀಗ ಸುಳ್ಯ ತಾಲೂಕು ಜಾಲ್ಸೂರು ಸಮೀಪದ ಪಂಜಿಕಲ್ಲು ಗಡಿಯ ಕರ್ನಾಟಕ ಭಾಗದಲ್ಲಿ ಲಾಟ್ರಿ ಸ್ಟಾಲುಗಳು ವ್ಯಾಪಾರ ಮಾಡುತ್ತಿದೆ. ಅಂಚಿ ಹೋದರೆ ಕೆಎಲ್ ಇಂಚಿ ಬಂದರೆ ಕೆಎ. ಕೆರೆ ದಡ, ಕೆರೆ ದಡ.
ಅಲ್ಲಿ ಪಂಜಿಕಲ್ಲು ಗಡಿಯಲ್ಲಿ ಕೇರಳ ರಾಜ್ಯದ ಜಾಗದಲ್ಲಿ ಮಲೆಯಾಳಿಗಳು ಈಗಾಗಲೇ ಅನೇಕ ಸ್ಟಾಲುಗಳಲ್ಲಿ ಲಾಟ್ರಿ ಮಾರುತ್ತಿದ್ದಾರೆ. ಕೇರಳ ಅರಣ್ಯ ಇಲಾಖೆಯ ಲೋಕಲ್ ಖಾಕಿಗಳಿಗೆ ಬಡಿಸಿ ಅರಣ್ಯ ಇಲಾಖೆ ಸ್ಥಳಗಳಲ್ಲೇ ಲಾಟ್ರಿ ಸ್ಟಾಲುಗಳನ್ನು ತೆರೆದು ಬಿಸಿ ದೋಸೆ ಸ್ಟೈಲಲ್ಲಿ ಮಾರಲಾಗುತ್ತಿದೆ. ಇದನ್ನು ನೋಡಿ ಬಾಯಿ ಚಪ್ಪರಿಸಿಕೊಂಡು ನಮ್ಮ ಕರ್ನಾಟಕದ ಕೆಲವು ಪಡ್ಡೆಗಳೂ ಗಡಿಯಲ್ಲಿ ಕೆರೆ ದಡ ಮಾಡುತ್ತಿರುವ ಬಗ್ಗೆ ಮಾಹಿತಿ ಇದೆ.
ಅಲ್ಲಿ ಪಂಜಿಕಲ್ಲು ಗಡಿಯಲ್ಲಿ ಕರ್ನಾಟಕ ಭಾಗದಲ್ಲಿ ಕೂಡ ಲಾಟ್ರಿ ಸ್ಟಾಲುಗಳು ವ್ಯಾಪಾರ ವಹಿವಾಟು ಮಾಡುತ್ತಿವೆ. ಪಂಜಿಕಲ್ಲಿನ ರೈಟ್ ಸೈಡ್ ಕೇರಳ ಭಾಗವಾದರೆ ಅಲ್ಲಿ ಮಾರ್ಗದ ಲೆಫ್ಟ್ ಸೈಡಲ್ಲಿ ಕರ್ನಾಟಕ ಭಾಗದಲ್ಲಿ ನೀರು ಹೋಗುವ ಚರಂಡಿ ಮುಚ್ಚಿ ಅದರ ಮೇಲೆ ಲಾಟ್ರಿ ಮಾರಲಾಗುತ್ತಿದೆ. ಈ ಮಾರಾಟ ಕರ್ನಾಟಕದಲ್ಲೇ ನಡೆಯುತ್ತಿದ್ದು ಸುಳ್ಯ ಪೋಲಿಸ್ ಸರಹದ್ದಿನಲ್ಲಿ ಬರುತ್ತದೆ. ಇನ್ನು ಇಲ್ಲಿಂದ ಸುಳ್ಯ ತಾಲೂಕಿನ ಬೇರೆ ಬೇರೆ ಕಡೆಗಳಿಗೆ ರಖಂ ಲಾಟ್ರಿ ಸೇಲ್ ಇದ್ದು ಸುಳ್ಯದ ಕೆಲವು ಗ್ರಾಮೀಣ ಪ್ರದೇಶಗಳಲ್ಲಿ ಕೂಡ ಕೇರಳ ಲಾಟ್ರಿ ಮನೆ ಮಾತಾಗಿದೆ. ಸುಳ್ಯ ಪೇಂಟೆಯಲ್ಲೂ ಅಲ್ಲಲ್ಲಿ ಅನಧಿಕೃತ ಲಾಟ್ರಿ ಸ್ಟಾಲುಗಳು ಇದ್ದು ಸುಳ್ಯ ಪೋಲಿಸರು ರೌಂಡ್ಸಿಗೆ ಹೋದಾಗ ಒಮ್ಮೆ ನಿಲ್ಲಿಸಿ ಯೋಗಕ್ಷೇಮ ವಿಚಾರಿಸಿದರೆ ಲಾಟ್ರಿ ಓಟಕ್ಕೆ ಕಡಿವಾಣ ಹಾಕಬಹುದು.

