ಎರಡು ಮರ್ಡರ್ ಕೇಸುಗಳು. ಒಂದು ಮಾಡಿ ಜೈಲಿನಲ್ಲಿ ಕುಂತು ಕುಂತು ಭಾರೀ ಕಷ್ಟದಲ್ಲಿ ಹೊರಗೆ ಬಂದು ಕೆಲವೇ ದಿನಗಳಲ್ಲಿ ಇನ್ನೊಂದು ವಿಕೆಟ್ . ಇದು ಸುಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರೌಡಿ ಶೀಟರ್ ಆಗಿ ದಾಖಲಾಗಿರುವ ಮನೋಹರ ಯಾನೆ ಮನು ಕತೆ. ಈ ಮನು ಮಾಡಿದ ಹಿಂಸಾತ್ಮಕ ಘಟನೆಗಳು ಇಂದು ಇಡೀ ಸಮಾಜದಲ್ಲಿ ಗಂಭೀರ ಆತಂಕವನ್ನು ಸೃಷ್ಟಿ ಮಾಡಿವೆ. ವಾಪಾಸ್ ಜೈಲಿಂದ ಬಂದು ಇನ್ನು ಯಾರಿಗೆಲ್ಲ ಟಿಕೆಟ್ ಇಶ್ಯೂ ಮಾಡುತ್ತಾನೋ ಎಂದು ಇಡೀ ಸುಳ್ಯ ಟೂ ಸಂಪಾಜೆ ಲೈನು ಆತಂಕದಲ್ಲಿದೆ.
ಮನು ಈಗಾಗಲೇ 2020ರಲ್ಲಿ ತನ್ನದೇ ಪರಮ ಸ್ನೇಹಿತನಾದ ಸಂಪತ್ ಕುಮಾರ್ ನನ್ನು ಢಂ ಮಾಡಿದ್ದು ಇಡೀ ಲೋಕಕ್ಕೆ ಗೊತ್ತಿರುವ ವಿಚಾರ. ಜೊತೆಗೇ ಇದ್ದು ಹಿಂದಿನಿಂದ ಕತ್ತಿ ಕೂಟಿದ್ದು ಮನುವಿನ ಕ್ರೂರತೆಗೆ ಒಂದು ಸಾಕ್ಷಿ.
ದುರಂತವೆಂದರೆ, ಇಂತಹ ಗಂಭೀರ ಹಿನ್ನೆಲೆ ಇದ್ದರೂ ಸಹ, ಇತ್ತೀಚೆಗೆ ಈ ವ್ಯಕ್ತಿ ಮತ್ತೊಮ್ಮೆ ಹಿಂಸೆಗೆ ತಿರುಗಿ, ಯಾವುದೇ ತಪ್ಪಿಲ್ಲದ ನಿರಪರಾಧಿ ಆಟೋ ಚಾಲಕನೊಬ್ಬನನ್ನು ಹತ್ಯೆ ಮಾಡಿರುವ ಆರೋಪ ಎದುರಿಸುತ್ತಿದ್ದಾನೆ ಮತ್ತು ಸದ್ಯಕ್ಕೆ ಕೇರ್ ಆಫ್ ಕೊಡಿಯಾಲ್ ಬೈಲ್ ಜೈಲ್.

ಇದು ಕೇವಲ ಒಂದು ಕುಟುಂಬಕ್ಕೆ ಮಾತ್ರವಲ್ಲ, ಇಡೀ ಸಮಾಜಕ್ಕೆ ತಲುಪಿದ ದೊಡ್ಡ ಆಘಾತವಾಗಿದೆ.ರೌಡಿ ಲಿಸ್ಟರ್ ಆಗಿರುವ ವ್ಯಕ್ತಿ ಪುನಃ ಪುನಃ ಅದೇ ಸೇಮ್ ಅಪರಾಧಗಳಲ್ಲಿ ತೊಡಗಿಕೊಳ್ಳುತ್ತಿರುವುದು ಕಾನೂನು ವ್ಯವಸ್ಥೆಯ ಮೇಲೆಯೇ ಪ್ರಶ್ನಾರ್ಥಕ ಚಿಹ್ನೆಯನ್ನು ಎತ್ತುತ್ತಿದೆ. ಇಂತಹ ಅಪರಾಧಿಗಳು ಸಮಾಜದಲ್ಲಿ ಮುಕ್ತವಾಗಿ ಸಂಚರಿಸುವುದರಿಂದ ಸಾಮಾನ್ಯ ಜನರ ಜೀವ ಮತ್ತು ಭದ್ರತೆಗೆ ಭಾರಿ ಅಪಾಯ ಉಂಟಾಗುತ್ತಿದೆ.
ಜೀವ ಬೆದರಿಕೆ, ರೋಲ್ ಕಾಲ್ ಮಾಡಿ
ನಿರಪರಾಧಿ ನಾಗರೀಕರ ಜೀವಕ್ಕೆ ಕಂಟಕನಾಗಿರುವ ಇಂತಹ ವ್ಯಕ್ತಿಗಳ ವಿರುದ್ಧ ಪೊಲೀಸ್ ಇಲಾಖೆ ಮತ್ತು ನ್ಯಾಯಾಂಗ ವ್ಯವಸ್ಥೆ ತಕ್ಷಣ ಹಾಗೂ ಕಠಿಣ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ. ಕೇವಲ ಪೋಲಿಸ್ ದಾಖಲೆಗಳಲ್ಲೇ ಪೊಟ್ಟು ರೌಡಿ ಲಿಸ್ಟ್ ಇಟ್ಟುಕೊಂಡು ಗೆದ್ದಲುಗಳಿಗೆ ಗೊಬ್ಬರ ಮಾಡಿ ಏನೂ ಪ್ರಯೋಜನವಿಲ್ಲ; ಅಪರಾಧಿಗಳನ್ನು ನಿಯಂತ್ರಿಸಲು ಪರಿಣಾಮಕಾರಿ, ಆಕ್ರಮಣಕಾರಿ ಕ್ರಮಗಳು ಅತ್ಯಗತ್ಯ.
ಸಮಾಜದಲ್ಲಿ ಶಾಂತಿ, ಸುರಕ್ಷತೆ ಮತ್ತು ನ್ಯಾಯವನ್ನು ಕಾಪಾಡಬೇಕಾದರೆ, ಇಂತಹ ಗಂಭೀರ ಅಪರಾಧಗಳಲ್ಲಿ ತೊಡಗಿರುವವರ ಹಾಗೂ ಅವನ ಚೇಲಾ ಗಳ ವಿರುದ್ಧ ಉದಾಹರಣೀಯ ಶಿಕ್ಷೆ ವಿಧಿಸಬೇಕು. ಇದರಿಂದ ಮಾತ್ರ ಮುಂದಿನ ದಿನಗಳಲ್ಲಿ ಇಂತಹ ದುಷ್ಕೃತ್ಯಗಳಿಗೆ ತಡೆಯೊಡ್ಡಲು ಸಾಧ್ಯವಾಗುತ್ತದೆ. ಇಲ್ಲದಿದ್ದರೆ ಅತ್ತೆ ಮನೆಗೆ ಹೋಗಿ ಬಂದ ಹಾಗೆ ಜೈಲಿಗೆ ಹೋಗಿ ಬರುತ್ತಾರೆ.ನಿರಪರಾಧಿ ಜನರ ಜೀವ ರಕ್ಷಣೆ ಸರ್ಕಾರ ಮತ್ತು ಕಾನೂನು ವ್ಯವಸ್ಥೆಯ ಮೊದಲ ಆದ್ಯತೆಯಾಗಬೇಕು. ಇಂಥಹ ಗಂಭೀರ ಆರೋಪಿಗಳನ್ನು ಗಂಭೀರವಾಗಿ ಪರಿಗಣಿಸ ಬೇಕಾಗಿದೆ.
