ಪುತ್ತೂರು ದೇವಸ್ಥಾನದ ವಠಾರದಲ್ಲಿ ಸಾರ್ವಜನಿಕ ಶಾಂತಿಭಂಗ ಆಗುವಂತೆ ಹೊಡೆದಾಡಿಕೊಂಡ ಭಟ್ರುಗಳು ಮತ್ತು ಅಂಡಿಗುಂಡಿ ಭಟ್ರುಗಳ ಮೇಲೆ ಸುಮೋಟೋ ಕೇಸ್ ಜಡಿಯಲಾಗಿದೆ ಎಂದು ತಿಳಿದುಬಂದಿದೆ. ಜಗಳಕ್ಕೆ ಜಾಗ ಅಲ್ಲೇ ಆಗಬೇಕಾ? ಕೋರ್ಟ್ ಮೈದಾನದಲ್ಲಿ ಹೊಡೆದಾಡಿಕೊಳ್ಳ ಬಹುದಿತ್ತು.

ಮೊನ್ನೆ ತಾನೇ ಜಾತ್ರೆ ಮುಗಿಸಿ, ಸ್ನಾನ ಮಾಡಿ ದೇವರು ಒಳಗೆ ಹೋಗಿದ್ದಾನೆ ಅಷ್ಟೇ. ಹೊರಗೆ ದೇವಸ್ಥಾನದ ಆವರಣದಲ್ಲಿ ಭಟ್ರುಗಳ ಮತ್ತು ಅಂಡಿಗುಂಡಿ ಭಟ್ರುಗಳ ಕುಸ್ತಿ ಶುರುವಾಗಿದೆ. ಹಾಗೆ ನೋಡಿದರೆ ಇಲ್ಲಿ ದೇವಸ್ಥಾನದ ಒಳಗೆ, ಹೊರಗೆ ಎರಡು ಬಣಗಳಿವೆ. ಸರ್ಕಾರಿ ನೇಮಕಾತಿ ಇರುವ ಭಟ್ರುಗಳು ಮತ್ತು ನೇಮಕಾತಿ ಹೊಂದಿರದ ಅಂಡಿಗುಂಡಿ ಭಟ್ರುಗಳು ಎಂದು ಎರಡು ವಿಧಗಳಿವೆ. ಈ ಎರಡು ಬಣಗಳ ಫೈಟಿಂಗ್ ನ ಪರಾಕಾಷ್ಠೆಯೇ ಮೊನ್ನೆಯೇ ಘಟನೆ. ಒಬ್ಬನ ಮಂಡೆ ಶರ್ಬತ್ತ್ ಮಾಡಲಾಗಿದೆ ಎಂದು ಸುದ್ದಿ.
ಮೊನ್ನೆ ಇಪ್ಪತ್ತನೇ ತಾರೀಕು ಪುತ್ತೂರು ನಗರ ಠಾಣಾ ಪೋಲಿಸರಿಬ್ಬರು ಲೋಕಲ್ ರೌಂಡ್ಸ್ ಮೇಲೆ ದೇವಸ್ಥಾನದ ಬಳಿ ಬಂದಾಗ ದೇವಸ್ಥಾನದ ಆವರಣದಲ್ಲಿ ದೊಡ್ಡ ಗುಳಿಗ್ಗ ಗಲಾಟೆ ಕೇಳಿ ಬಂದಿದೆ. ಈ ಬಗ್ಗೆ ಪೋಲಿಸರು ಹತ್ತಿರ ಬಂದು ನೋಡಲಾಗಿ ದೇವಸ್ಥಾನದ ದೇವೆರ್ ತುಂಬುನ ಹರೀಶಣ್ಣೆರ್ ಮತ್ತು ಹರ್ಷಣ್ಣೆರ್ ನಡುವೆ ರಂಬಾರೋಟಿ ನಡೆಯುತ್ತಿತ್ತು. ಹರೀಶಣ್ಣೆರ್ ಬಗ್ಗೆ ಹರ್ಷಣ್ಣೆರ್ ಏನೋ ಅಸಭ್ಯವಾಗಿ ದೂರರ್ಜಿ ಬರೆದ ಲಗಾಯ್ತು ಈ ಜಗಳ. ಪೋಲಿಸರು ಹತ್ತಿರ ಹೋಗಿ ಗಲಾಟೆ ಮಲ್ಪೊರ್ಚಿ ಅಂತ ಹೇಳಿದರೂ ಕ್ಯಾರೇ ಮಾಡದ ಇಬ್ಬರೂ ಕೈ ಕೈಮಿಲಾಯಿಸಿಕೊಂಡು ಹೊಡೆದಾಡಿ ಕೊಂಡಿದ್ದರು. ಫೈಟಿಂಗ್ ನಲ್ಲಿ ಹರ್ಷಣ್ಣೆರ್ ಹರೀಶಣ್ಣೆರ ಮಂಡೆ ಶರ್ಬತ್ತ್ ಮಾಡಿದ್ದು ನೆತ್ತೆರ್ ಹರಿದು ಓಕುಳಿ ಆಗಿತ್ತು ಎಂದು ತಿಳಿದುಬಂದಿದೆ. ನಂತರ ಪೋಲಿಸರು ಮತ್ತು ಇತರೇ ಅಣ್ಣೇರ್ ಗಳು, ಸಾರ್ವಜನಿಕರು ಸೇರಿ ಗಲಾಟೆ ಬಿಡಿಸಿದ್ದರು. ಈ ಬಗ್ಗೆ ಹರೀಶಣ್ಣೆರ್ ಆಸ್ಪತ್ರೆಗೆ ಅಡ್ಮಿಟ್ ಕೂಡ ಆಗಿದ್ದರು. ಈ ನಡುವೆ ಕಾಣದ ಕೈಗಳು ಪ್ರಕರಣದಲ್ಲಿ ಎಂಟ್ರಿ ಆಗಿದ್ದು ಯಾವುದೇ ಕೇಸ್ ಆಗದಂತೆ ಪ್ರೆಷರ್ ಹಾಕಿತ್ತು. ನಂತರ ಎಲ್ಲವೂ ಸುಖಾಂತ್ಯ, ಶುಭಂ ಎಂದು ಅಂದು ಕೊಳ್ಳುವಷ್ಟರಲ್ಲಿ ಸುದ್ದಿ ದಕ್ಷಿಣ ಕನ್ನಡ ಜಿಲ್ಲಾ ಪೋಲಿಸ್ ವರಿಷ್ಠನ ಟೇಬಲ್ ಮೇಲೆ ಬಂದಿದೆ. ಮಂಡೆ ಶರ್ಬತ್ತ್ ಆಗಿದೆ, ರಕ್ತದ ಒಸರ್ ಕಂಡು ಬಂದಿದೆ, ಇನ್ನೇನು ನಿಮ್ಮ ಪಟ್ಟಾಂಗ, ಕೇಸ್ ಹಾಕಿ ಎಂದು ಮೇಲಿಂದ ಬಂದಿದೆ. ಹಾಗಾಗಿ ಬೇರೆ ಯಾವುದೇ ನರಿ ಉಪಾಯ ಕಾಣದೆ ಪುತ್ತೂರು ಪೋಲಿಸರು ಅಪಾಯವಲ್ಲದ ಸೆಕ್ಷನ್ ಅಡಿಯಲ್ಲಿ ಸುಮೋಟೋ ಕೇಸ್ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಈ ಫೈಟಿಂಗ್ ನ ಮೂಲ ಉದ್ದೇಶವೇ ಹರೀಶಣ್ಣೆರನ್ನು ದೇವಸ್ಥಾನದಿಂದ ಹೊರಗೆ ಹಾಕುವುದಾಗಿತ್ತು ಎಂದು ತಿಳಿದುಬಂದಿದೆ.

ಈ ಭಟ್ರುಗಳ ಜಗಳದಲ್ಲಿ ದೇವಸ್ಥಾನದ ಹೆಸರಿಗೆ ಕಳಂಕ ಬರುವುದು ಗ್ಯಾರಂಟಿ. ದೇವಸ್ಥಾನ ಅಂದ್ರೆ ರಣ ಕುಡುಕರೂ ಬಾಲ ಮಡಚಿ ಕೂರುತ್ತಿರುವಾಗ ಈ ಭಟ್ರುಗಳದ್ದು ಎಂಥದ್ದು ಮಾರಾಯ್ರೆ? ಈ ಎಲ್ಲಾ ವಾರ್ ಗಳಿಗೆ, ಕೋಲ್ಡ್ ವಾರ್ ಗಳಿಗೆ, ಉಸಿರು ಕಟ್ಟಿಸುವ ವಾತಾವರಣಕ್ಕೆ ಮೂಲ ಕಾರಣ ನೇಮಕಾತಿ ಇಲ್ಲದ ಅಂಡಿಗುಂಡಿ ಭಟ್ರುಗಳು ಮತ್ತು ನೌಕರರು. ಇವರನ್ನೇಲ್ಲ ಈ ಮಳೆಗಾಲದಲ್ಲಾದರೂ ಕುಪ್ಪಿಯಲ್ಲಿ ತುಂಬಿಸಿ ಸಕಲ ಪುಕುಲಿ ತೀರ್ಥದಲ್ಲಿ ವಿಸರ್ಜನೆ ಮಾಡಿದರೆ ದೇವಸ್ಥಾನಕ್ಕೆ ಒಳ್ಳೆದು.
ಶಾಂತಾ ಕುಂಟಿನಿಗೆ ಸನ್ಮಾನ
ಹೆಸರಾಂತ ಕವಯಿತ್ರಿ, ಗಾಯಕಿ ಶ್ರೀಮತಿ ಶಾಂತಾ ಕುಂಟಿನಿ ಇವರಿಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ 5/4/26 ರಂದು ನಡೆದ ಗಾನಸಿರಿ ಸಂಸ್ಥೆಯ ರಜತ ವರ್ಷ ಸಂಭ್ರಮದ ಉದ್ಘಾಟನಾ ಸಮಾರಂಭದಲ್ಲಿ ರಾಜ್ಯ ಮಟ್ಟದ ಗಾನಸಿರಿ ಕರ್ನಾಟಕ ಭೂಷಣ ಪ್ರಶಸ್ತಿಯನ್ನು ಶಾಲು ಹೊದಿಸಿ ಪೇಟ ಧರಿಸಿ, ಸ್ಮರಣಿಕೆ ನೀಡುವುದರ ಮೂಲಕ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಬೆಂಗಳೂರಿನ ಹಿರಿಯ ಸುಗಮ ಸಂಗೀತಜ್ಞರು ಮತ್ತು ಸಂಗೀತ ನಿರ್ದೇಶಕರು ಆಗಿರುವ ಡಾ.ಜಯಶ್ರೀ ಅರವಿಂದ್ ಬೆಂಗಳೂರು ಹಾಗೂ ಮಾಜಿ ಶಾಸಕಿ, ಪುತ್ತೂರು ವಿಧಾನಸಭಾ ಕ್ಷೇತ್ರದ ಶ್ರೀಮತಿ ಶಕುಂತಲಾ ಟಿ.ಶೆಟ್ಟಿ ಹಾಗೂ ಗಾನಸಿರಿ ಕಲಾಕೇಂದ್ರ ಸಂಸ್ಥೆಯ ಸ್ಥಾಪಕರಾದ ಹಾಗೂ ಗುರುಗಳೂ ಆಗಿರುವ ಡಾ.ಕಿರಣ್ ಕುಮಾರ್ ಹಾಗೂ ಇನ್ನಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು.

