
ಮೂಡಾಯಿ ಕೊಲ್ಲಮೊಗ್ರದಲ್ಲಿ ಕಳೆದ ಬುಧವಾರ ನಡೆದ ಜುಗಾರಿ ಕಲದಲ್ಲಿ ಪೆಟ್ಟುಗುಟ್ಪು ಆಗಿದೆ ಎಂದು ತಿಳಿದುಬಂದಿದೆ. ಈ ಸೈಡಲ್ಲಿ ಚಿಲ್ಲರೆ ಕೋಳಿಕಟ್ಟ ಮತ್ತು ಜುಗಾರಿ ದಿನಾ ನಡೆಯುತ್ತಿದೆ ಎಂದು ತಿಳಿದುಬಂದಿದೆ.

ಹಾಗೆಂದು ಮೂಡಾಯಿ ಕೊಲ್ಲಮೊಗ್ರದ ನ್ಯೂಸ್ ಡೈಲಿ ಹಾಕುವಂತಿಲ್ಲ. ಒಂದೇ ಸಮ ನ್ಯೂಸ್ ಹಾಕಿದ್ರೆ ದಢಕ್ಕನೆ ಎದ್ದು ಕೂರುವ ಬುದ್ಧಿಜೀವಿಗಳು ನಾಯಿಗೆ ಬಯ್ದಂತೆ ಬಯ್ಯುತ್ತಾರೆ, ಕೊಲೆ ಬೆದರಿಕೆ ಹಾಕುತ್ತಾರೆ ಮತ್ತು ನನ್ನ ಹೆಂಡ್ತಿಗೆ ಕಂಡಾಪಟ್ಟೆ ಬಯ್ದು ಬಿಡುತ್ತಾರೆ. ತಾಕತ್ತಿದ್ದರೆ ಕೊಲ್ಲಮೊಗ್ರಕ್ಕೆ ಬಾ ಅಂತ ಸವಾಲೆಸೆಯುತ್ತಾರೆ. ಅಂತಹ ತಾಕತ್ತೆಲ್ಲ ಇಲ್ಲ ಅಂತ ನಾನೇ ಹೇಳಿ ಬಿಡುತ್ತೇನೆ. ಇದೀಗ ಕೊಲ್ಲಮೊಗ್ರದ ಜುಗಾರಿ ಕಲಗಳ ಬಗ್ಗೆ ಮಾಹಿತಿ ಬಂದಿದ್ದು ಕೊಲ್ಲಮೊಗ್ರದ ರಿಸರ್ವ್ ಫಾರೆಸ್ಟ್ ಗಳಲ್ಲಿ, ಆಚೆ ಕಟ್ಟಾ ಸೈಡ್, ಇನ್ನೂ ಆಚೆ ಕಲ್ಮಕಾರಿನ ಸಂದುಗೊಂದಿನಲ್ಲಿ ನಿತ್ಯ ಜುಗಾರಿ ನಡೆಯುತ್ತಿದೆ ಎಂದು ತಿಳಿದುಬಂದಿದೆ.
ಹಾಗೆಂದು ಕೊಲ್ಲಮೊಗ್ರದಲ್ಲಿ ನಿನ್ನೆ ಕೂಡ ದೊಡ್ಡ ಮಟ್ಟದಲ್ಲಿ ಜುಗಾರಿ ನಡೆದಿದೆ. ಬೆಳ್ತಂಗಡಿಯ ತಾಲೂಕು ಮಟ್ಟದ ಜುಗಾರಿ ಪ್ಲೇಯರ್ಸ್ ಬಂದಿದ್ದಾರಂತೆ. ಜುಗಾರಿ ಸಂಘಟಕರು ಮೇಸೆಯಲ್ಲಿ ಒಳ್ಳೇ ದುಡ್ಡು ಮಾಡುತ್ತಿದ್ದು ಇದರ ಟೇಸ್ಟ್ ಸಿಕ್ಕಿರುವ ಕಾರಣ ಕೊಲ್ಲಮೊಗ್ರ ರಿಸರ್ವ್ ಫಾರೆಸ್ಟ್ ಮುಂದೆ ಜುಗಾರಿ ರಿಸರ್ವ್ ಫಾರೆಸ್ಟ್ ಆಗದಿದ್ದರೆ ಅಷ್ಟೇ ಸಾಕು. ಕಳೆದ ಬುಧವಾರ ಕೊಲ್ಲಮೊಗ್ರದಲ್ಲಿ ನಡೆದ ಜುಗಾರಿಯ ಕಲದಲ್ಲಿ ಫೈಟಿಂಗ್ ನಡೆದಿದ್ದು ಶಿರೂರಿನ ಹುಡುಗನೊಬ್ಬನಿಗೆ ಸಮಾ ಬಿದ್ದಿದೆ ಎಂದು ಸುದ್ದಿ. ಜುಗಾರಿ ಕಲದಲ್ಲಿ ದುಡ್ಡಿನ ವಿಷಯದಲ್ಲಿ ಶುರುವಾದ ಒಂಜೊಂಜೆ ಪಾತೆರಕ್ಕೆ ಪಾತೆರ ಬೆಳೆದು ಫೈಟಿಂಗ್ ನಲ್ಲಿ ಸಂಪನ್ನಗೊಂಡಿತು ಎಂದು ತಿಳಿದುಬಂದಿದೆ. ಕೊಲ್ಲಮೊಗ್ರದ ತಾಲೂಕು ಮಟ್ಟದ ಜುಗಾರಿ ಪ್ರತಿಭೆ ಚೂರಿ ಮತ್ತು ಕೇಚು ಸೇರಿಕ್ಕೊಂಡು ಶಿರೂರಿನ ಇನ್ನೊಬ್ಬ ಗ್ರಾಮೀಣ ಜುಗಾರಿ ಪ್ರತಿಭೆಯನ್ನು ಓಡಿಸಿ ಓಡಿಸಿ ಹೊಡೆದಿದ್ದಾರೆ. ಫೈಟಿಂಗ್ ನಲ್ಲಿ ಸಂಜೀವ ಶೆಟ್ಟಿ ಕುಂಟುದಂಗಡಿಯಿಂದ ಓ ಮೊನ್ನೆ ತಗೊಂಡಿದ್ದ ಶಿರೂರು ಹುಡುಗನ ಪೊಸ ಶರ್ಟ್ ಚಿಪ್ಪಡ್ ಚೀರ್ ಆಗಿದೆಯಂತೆ. ಬಂಜರ ಪೆಟ್ಟು ತಿಂದ ಶಿರೂರು ಹುಡುಗ ಹರಿದ ಅಂಗಿಯ ಗುಬ್ಬಿ ಹಾಕುತ್ತಾ “ಇನ್ನೂ ನೀವುಗ ಹೇಂಗೆ ಜುಗಾರಿ ಆಟ ಆಡಿರೆ ಅಂತ ನಾ ನೋಡಿನೆ. ನಿಮ್ಮ ಎಲ್ಲಾ ಪೋಲಿಸ್ ನ ಕೈಗೆ ಕೊಡಿಸದಿದ್ದರೆ ನೋಡುಮ್ಮ” ಎಂದು ಶಪಥ ಮಾಡಿ ಹೋಗಿದ್ದಾನೆ ಎಂದು ತಿಳಿದುಬಂದಿದೆ. ಆದರೆ ಶಿರೂರು ಹುಡುಗನ ಶಪಥವನ್ನೆಲ್ಲ ಕ್ಯಾರೇ ಮಾಡದ ಚೂರಿ ಗ್ಯಾಂಗ್ ನಿನ್ನೆ ಕೂಡ ಜುಗಾರಿ ನಡೆಸಿದೆ, ಮೊನ್ನೆಯೂ ಇತ್ತಂತೆ.

ಹಾಗೆಂದು ಈ ಚೂರಿ ಗ್ಯಾಂಗ್ ಜುಗಾರಿ ಮಾತ್ರವಲ್ಲದೆ ಲೋಕಲ್ ಕೋಳಿ ಕಟ್ಟ ಕೂಡ ನಡೆಸುತ್ತಿದೆ. ಫೋರ್ ವೀಲ್ ಜೀಪು ಕೂಡ ಹೋಗದ ಜಾಗೆಗಳಲ್ಲಿ, ಬೀಟ್ ಪೋಲಿಸರ ಕಾಕ ದೃಷ್ಟಿ ಬೀಳದ ಕಡೆಗಳಲ್ಲಿ, ನರಮಾನಿ ಸಂಚಾರ ಇಲ್ಲದ ಪದವುಗಳಲ್ಲಿ, ಡೆಬ್ಬೆಲಿಗಳಲ್ಲಿ, ರಿಸರ್ವ್ ಫಾರೆಸ್ಟ್ ಖಾಲಿ ಸ್ಥಳಗಳಲ್ಲಿ ಇವರು ಕಲ ಬಿಡಿಸುತ್ತಾರೆ ಎಂದು ತಿಳಿದುಬಂದಿದೆ. ಓ ಮೊನ್ನೆ ಈ ಚೂರಿ ಒಂದು ಕಟ್ಟದಲ್ಲಿ ಕೋಳಿಗಾಗಿ ಜಗಳ ಮಾಡಿದ್ದು ಬಾಳುಗೋಡಿನ ಕೋಳಿ ಧನಿಯೊಬ್ಬನಿಗೆ ಎರಡ್ಡು ಬಿಗಿದ ಬಗ್ಗೆ ಕೂಡ ಮಾಹಿತಿ ಇದೆ. ಕೊಲ್ಲಮೊಗ್ರದ ಯಾಕೆ ಬರೆದೆ, ನಿನ್ನ ಕಾಲು ಕಟ್ ಮಾಡಿ ಕೈಯಲ್ಲಿ ಕೊಡುತ್ತೇವೆ ಎಂದು ಹೇಳುವ ಕೊಲ್ಲಮೊಗ್ರದ ನನ್ನ ಪ್ರೀತಿಯ ಯುವಕರೇ ಮೊದಲು ಚೂರಿ ಗ್ಯಾಂಗಿನ ಜುಗಾರಿ ನಿಲ್ಲಿಸಿ, ಅವರು ನಡೆಸುವ ಕೋಳಿ ಕಟ್ಟಗಳ ಬಗ್ಗೆ ನಿಗಾ ವಹಿಸಿ. ನಂತರ ನಮ್ಮಲ್ಲಿಗೆ ಬಂದರೆ ಸಾಕು ಕೈಕಾಲು ಮುರಿಯಲು.
